ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವನಹಳ್ಳಿ ಹಾಗೂ ಸುತ್ತಮುತ್ತಲ 13 ಗ್ರಾಮಗಳಲ್ಲಿನ ಭೂಸ್ವಾಧೀನ ವಿರೋಧಿಸಿ ಕಳೆದ 3 ವರ್ಷಗಳಿಂದಲೂ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹಲವು ರೈತ ಹೋರಾಟಗಾರರನ್ನು ಬಂಧಿಸಲಾಗಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡಾ ದೇವನಹಳ್ಳಿ ರೈತರ ಹೋರಾಟದಲ್ಲಿ ಭಾಗವಹಿಸಿದ್ದರು. ಸ್ವಲ್ಪ ಹೊತ್ತು ರೈತರ ಹೋರಾಟದಲ್ಲಿ ಧ್ವನಿಗೂಡಿಸಿ ಬೇರೆ ಕಾರ್ಯಕ್ರಮ ನಿಮಿತ್ತ ವಾಪಸ್ ಬಂದಿದ್ದರು.
ಈಗ ಕೆಲ ರೈತರು ಹಾಗೂ ಕೆಲ ರೈತ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
”ಏನಿದು ಅನ್ಯಾಯ? ರಾಜ್ಯ ಸರ್ಕಾರಕ್ಕೆ ಏನಾಗಿದೆ?. ತಮ್ಮ ಭೂಮಿಗೋಸ್ಕರ ದೇವನಹಳ್ಳಿ ರೈತರು ಹೋರಾಡುತ್ತಿದ್ದಾರೆ. ಅವರ ಸಹಾಯಕ್ಕೆ ಬಂದ ಸಾಮಾಜಿಕ ಕಾರ್ಯಕರ್ತರನ್ನೂ ಬಂಧಿಸಿದ್ದೀರ. ಅಷ್ಟೇ ಅಲ್ಲ, 80 ವರ್ಷದ ವೃದ್ಧೆಯು ತಮ್ಮ ಭೂಮಿಗಾಗಿ ಹೋರಾಟಕ್ಕೆ ಬಂದಿದ್ದಾರೆ. ಅವರನ್ನೂ ಬಂಧಿಸಿದ್ದೀರಿ. ನೂರಾರು ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹಳ್ಳಿಗಳಿಂದ ಬಂದಿದ್ದಾರೆ. ಅಲ್ಲಿ ಬಂದಿರುವ ರೈತರು ಹಣದ ಆಸೆಗೆ ಬಂದಿಲ್ಲ ಅಥವಾ ಯಾರದ್ದೋ ಜಮೀನನ್ನು ಕಬ್ಜ ಮಾಡೋದಕ್ಕೆ ಬಂದಿಲ್ಲ. ಅವರೆಲ್ಲರೂ ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಟ ಮಾಡಲು ಬಂದಿದ್ದಾರೆ. ನಾನೂ ಕೂಡಾ ಭಾಗವಹಿಸಿ, ಬೇರೆ ಕಾರ್ಯಕ್ರಮ ಇತ್ತೆಂದು ವಾಪಸ್ಸಾದೆ.
ನಾನೂ ಆ ಹೋರಾಟಕ್ಕೆ ಹೋಗಿದ್ದೆ. ನನ್ನನ್ನೂ ಅರೆಸ್ಟ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರಕಾಶ್ ರಾಜ್ ಆಗ್ರಹ ಮಾಡಿದ್ದಾರೆ.
ಸರ್ಕಾರ ಜನರನ್ನು ಹೀಗೆ ಅಜಾಗರೂಕತೆಯಿಂದ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಇಲ್ಲಿಗೆ ನಿಲ್ಲುತ್ತದೆ ಅಂದುಕೊಳ್ಳಬೇಡಿ. ಈ ಹೋರಾಟ ದೊಡ್ಡದಾಗಲಿದೆ. ಈ ದೌರ್ಜನ್ಯವನ್ನು ನಾವು ಪ್ರಶ್ನಿಸಬೇಕು. ನಾನು ಕರ್ನಾಟಕ ಪ್ರತಿಯೊಬ್ಬ ರೈತನಿಗೂ ಹಾಗೂ ಪ್ರಜೆಗಳಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವಿಂದು ದೇವನಹಳ್ಳಿ ರೈತರ ಪರವಾಗಿ ನಿಲ್ಲಲಿಲ್ಲ ಅಂದ್ರೆ ನಾಳೆ ನಮಗೂ ಈ ಗತಿ ಬರುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರಕಾಶ್ ರಾಜ್ ಎಕ್ಸ್ ನಲ್ಲಿ ಮಾಡಿರುವ ತಮ್ಮ ವಿಡಿಯೋ ಪೋಸ್ಟ್ಗೆ, ”ದೇವನಹಳ್ಳಿಯ ರೈತರನ್ನು.. ಅವರ ಪರವಾಗಿ ಹೋರಾಟಕ್ಕೆ ನಿಂತ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ಈ ಸರ್ಕಾರಕ್ಕೆ ಧಿಕ್ಕಾರ. ಈ ರೈತ ವಿರೋಧಿ ಸರ್ಕಾರದ ದೌರ್ಜನ್ಯವನ್ನು ನಾವೆಲ್ಲರು ಒಂದಾಗಿ ಖಂಡಿಸಲೇಬೇಕಾಗಿದೆ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಮತ್ತೊಂದು ಎಕ್ಸ್ ಪೋಸ್ಟ್ನಲ್ಲಿ, ”ಮಾನ್ಯ ಮುಖ್ಯಮಂತ್ರಿಗಳೇ, ದಯವಿಟ್ಟು ಈ ರೈತ ವಿರೊಧಿ ಕೆಲಸವನ್ನು ನಿಲ್ಲಿಸಿ.
ದೇವನಹಳ್ಳಿ ರೈತರ ಈ ನ್ಯಾಯಯುತ ಹೋರಾಟದಲ್ಲಿ ನಾವೆಲ್ಲ ಅವರೊಂದಿಗಿದ್ದೇವೆ. ಇಂದಿನ ದೇವನಹಳ್ಳಿ ಚಲೋ ಚಳುವಳಿಯಲ್ಲಿ ಭಾಗವಹಿಸುತ್ತೆದ್ದೇನೆ ನೀವು ಈ ಹಿಂದೆ ಕೊಟ್ಟ ಮಾತಿನಂತೆ ನಡೆಯುತ್ತೀರೆಂದು ಆಶಿಸುತ್ತೇವೆ‘ ಎಂದು ಬರೆದುಕೊಂಡಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರುಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ 1,700 ಎಕರೆ ಭೂಸ್ವಾಧೀನಕ್ಕೆ ಕೆಐಡಿಬಿಯಿಂದ ಅಧಿಸೂಚನೆ ಹೊರಡಿಸಲಾಗಿತ್ತು.
ಅದರಲ್ಲಿ ಸುಮಾರು 500 ಎಕರೆಯನ್ನು ಭೂಸ್ವಾಧೀನದಿಂದ ಕೈಬಿಡಲಾಗುವುದು. ಉಳಿದದ್ದನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ದೇವನಹಳ್ಳಿ ರೈತರ ಹೋರಾಟ ತೀವ್ರಗೊಂಡಿದೆ.

