ನಿಗೂಢವಾಗಿ ಸ್ಫೋಟಗೊಂಡ ಸಿಸಿ ರಸ್ತೆ, ಸ್ಫೋಟಕ್ಕೆ ಹೈ ವೋಲ್ಟೇಜ್ ಕಾರಣವಂತೆ!?

News Desk

ಚಂದ್ರವಳ್ಳಿ ನ್ಯೂಸ್, ಆನೇಕಲ್, ಗ್ರಾ.ಜಿಲ್ಲೆ:
ಕಾಂಕ್ರೀಟ್ ರಸ್ತೆಯೊಂದು ಭಾರಿ ಶಬ್ದದೊಂದಿಗೆ ನಿಗೂಢವಾಗಿ ಸ್ಫೋಟಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪದ ಬನಹಳ್ಳಿ ರಾಘವೇಂದ್ರ ಕಾಲೋನಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ರಸ್ತೆಯ ಸಿಮೆಂಟ್, ಕಾಂಕ್ರೀಟ್ ಮತ್ತು ಜಲ್ಲಿ ಕಲ್ಲುಗಳು ಕಿತ್ತು ಚೆಲ್ಲಾಪಿಲ್ಲಿ ಬಿದಿದ್ದು, ಸುಮಾರು ನೂರು ಮೀಟರ್ ಎಸೆಯಲ್ಪಟ್ಟಿವೆ. ಸ್ಫೋಟದ ಜೊತೆ ಬೆಂಕಿ ಕಿಡಿ ಕೂಡ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಸ್ಫೋಟ ನಡೆದ ಸಂದರ್ಭದಲ್ಲಿ ಮನೆಯ ಹೊರಗಡೆ ಕುಳಿತ್ತಿದ್ದ ಜನರು ಆತಂಕದಿಂದ ಮನೆಗಳ ಒಳಗೆ ಓಡಿ ಹೋಗಿದ್ದಾರೆ.

ಸ್ಫೋಟಕ್ಕೂ ಕೆಲ ಕ್ಷಣದ ಮೊದಲು ವಾಟರ್ ಟ್ಯಾಂಕರ್ ಒಂದು ಆ ರಸ್ತೆಯಲ್ಲಿ ಹಾದು ಹೋಗಿತ್ತು ಎನ್ನಲಾಗಿದೆ. ಟ್ಯಾಂಕರ್ ಮುಂದಕ್ಕೆ ಸಾಗುತ್ತಿದ್ದಂತೆಯೇ ಭಾರಿ ಶಬ್ದ ಮತ್ತು ಬೆಂಕಿ ಜೊತೆ ರಸ್ತೆ ಸ್ಫೋಟಗೊಂಡಿದೆ.
ಸ್ಫೋಟಕ್ಕೆ ನಿರ್ದಿಷ್ಟ ಕಾರಣ ತಿಳಿದಿಲ್ಲವಾದರೂ ಸ್ಫೋಟಗೊಂಡಿರುವ ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ರಸ್ತೆ ಮೇಲೆ ಹಾದು ಹೋಗಿರುವ ಹೈವೋಲ್ಟೆಜ್ ವಿದ್ಯುತ್ ತಂತಿ ತೀರಾ ಕೆಳಗೆ ಜೋತು ಬಿದ್ದಿದೆ. ಅದರಿಂದಲೇ ಇಂತಹ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಸ್ಫೋಟದಿಂದ ಭಯದಲ್ಲಿರುವ ಗ್ರಾಮಸ್ಥರು ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಗ್ರಾಮಸ್ಥರು ಶಂಕಿಸಿರುವಂತೆ ನಿಗೂಢ ಸ್ಫೋಟಕ್ಕೆ ರಸ್ತೆ ಮೇಲೆ ಹಾದು ಹೋಗಿರುವ 220 ಕೆವಿ ಹೈವೋಲ್ಟೆಜ್ ವಿದ್ಯುತ್ ತಂತಿ ಕಾರಣ ಎಂದು ಚಂದಾಪುರ ಕೆಪಿಟಿಸಿಎಲ್ ಜೆಇ ಮಹೇಶ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
220 ಕೆವಿ ವಿದ್ಯುತ್ ತಂತಿ ತೀರಾ ಕೆಳಗೆ ಜೋತು ಬಿದ್ದಿದ್ದು, ಅದರ ಕೆಳಗೆ ಎತ್ತರದ ವಾಹನ ಹಾದು ಹೋದರೆ ಅರ್ಥಿಂಗ್ ಜೋನ್​​ಗೆ ಫಾಲ್ಟ್ ಕರೆಂಟ್ ನುಗ್ಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಲೈನ್ ಟ್ರಿಪ್ ಆಗಿದೆ. ಹಾಗಾಗಿ ಸ್ಫೋಟದಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಮಹೇಶ್ ಹೇಳಿದ್ದಾರೆ.

ಜೋತು ಬಿದ್ದಿರುವ ದೊಡ್ಡ ಲೈನ್?
ಯಾರಂಡಹಳ್ಳಿಯಿಂದ ತಮಿಳುನಾಡಿಗೆ ವಿದ್ಯುತ್ ಪೂರೈಕೆ ಮಾಡುವ ಹೈವೋಲ್ಟೇಜ್ ಲೈನ್ ಇದಾಗಿದೆ. ತುಂಬಾ ಹಳೆಯ ಲೈನ್ ಆಗಿದ್ದರಿಂದ ಬಿಸಿಲಿಗೆ ಜೋತು ಬೀಳುತ್ತಿದೆ. ಲೈನ್ ದುರಸ್ತಿ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೋತು ಬಿದ್ದಿರುವ ಲೈನ್ ಅನ್ನು ಸದ್ಯ ತಾತ್ಕಾಲಿಕವಾಗಿ ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಜನರ ನೆತ್ತಿ ಮೇಲೆ ಯಮದೂತನಂತೆ 220 ಕೆವಿ ಹೈವೋಲ್ಟೆಜ್ ವಿದ್ಯುತ್ ಲೈನ್ ನೇತಾಡುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಕೆಪಿಟಿಸಿಎಲ್ ಅಧಿಕಾರಿಗಳು ಇನ್ನಾದರೂ ಸಮಸ್ಯೆಗೆ  ಪರಿಹಾರ ಹುಡುಕುತ್ತಾರಾ ಕಾದುನೋಡಬೇಕಿದೆ.

 

Share This Article
error: Content is protected !!
";