ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗೃತಿ
ಬೆಳಕರಿಯುತಿದೆ ನನ್ನವರಲಿ
ಮತ್ತೆ ಕವಿಯಲು ಬಿಡುವುದಿಲ್ಲ
ನವೀರ ಹೊಂಗಿರಣ
ತಿಳಿ ಬಣ್ಣದೋಕುಳಿ ಎಳೆಗಳು
ಬಿಡದಂತೆ ಹಿಡಿಯಿರೋ
ಆ ಕಾರ್ಗತ್ತಲು ತಡೆಯಿರೋ
ಅದೆಷ್ಟು ದಿನಗಳ ಅಸಮಾನತೆ
ಎದ್ದಿಲ್ಲ ಬಿದ್ದಲ್ಲೇ ಗೋರಿಗಳು
ತುಳಿತದಿ ಕಳೆದುಳಿದ ಕಿಡಿಗಳು
ಓಣಿಗಳ ಎಚ್ಚರಿಕೆಯ ಪ್ರೇತಾತ್ಮಗಳು
ಕಟ್ಟಿದ ಉಸಿರಲ್ಲೇ ಹುರಿದುಂಬಿಸಿ
ಬೆಳಕಿನೆಡೆಗೆ ನಮ್ಮನ್ನ ನಡೆಯಿಸಿ
ಉದಯದ ಸುಪ್ರಭಾತ ಹಾಡಿದ್ದಾರೆ
ಜ್ಯೋತಿಗಿರದ ಎಡ ಬಲ
ಅಂತರಗಳು ನಮಗೇತಕೋ
ಮನು ತತ್ವ ವಿಕಾರಗಳು
ಮತ ಜಾತಿ ಧರ್ಮಗಳು
ಮಡಿವಂತಿಕೆ ಮನಸ್ಸುಗಳು
ಒಪ್ಪಿದರೆಷ್ಟು ಬಿಟ್ಟರೆಷ್ಟು
ಹಾಲ ಸಾಗರದ ಹಂಸಗಳಂತೆ
ಬೆಸೆಯೋಣ ಬೆರೆಯೋಣ
ಸ್ನೇಹಮಯ ಬಂಧುತ್ವ ಬೆಳೆಸೋಣ
ಬನ್ನಿ ಸಿದ್ಧರಾಗಿ ಜಾಗೃತಿ ಓಟಕ್ಕೆ
ನವಭಾರತಕ್ಕೆ ಮುನ್ನುಡಿ ಬರೆಯೋಣ
ಕವಿತೆ: ಕುಮಾರ್ ಬಡಪ್ಪ, ಚಿತ್ರದುರ್ಗ.

