ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಅವರೇ ಬೆಂಗಳೂರು ವಿಶ್ವವಿದ್ಯಾಲಯ ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷದ ಆಸ್ತಿಯೂ ಅಲ್ಲ ಎಂದು ಜೆಡಿಎಸ್ ಹರಿಹಾಯ್ದಿದೆ. “ಬೆಂಗಳೂರು” ಎಂಬುದು ಈ ನೆಲಮೂಲದ ಹೆಗ್ಗುರುತು. ಸಮಸ್ತ ಕನ್ನಡಿಗರ ಹೆಮ್ಮೆ. ಹಾಗೂ ಕನ್ನಡಿಗರ ಪ್ರತಿಧ್ವನಿ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ನಗರ.
ಬೆಂಗಳೂರು ಎಂಬುದೇ ಒಂದು ವಿಶ್ವ ಪ್ರಸಿದ್ಧ ಬ್ರ್ಯಾಂಡ್. ಅದೇ ಬೆಂಗಳೂರು ಹೆಸರಿಗೆ ಇರುವ ಶಕ್ತಿ ಎಂದು ಜೆಡಿಎಸ್ ತಿಳಿಸಿದೆ. ನಮಗೆ ಡಾ.ಮನಮೋಹನ್ ಸಿಂಗ್ ಅವರ ಮೇಲೆ ಅಪಾರವಾದ ಗೌರವವಿದೆ. ಆದರೆ “ಬೆಂಗಳೂರು ನಗರ ವಿವಿ”ಗೆ ಪರ್ಯಾಯವಾಗಿ ಬೇರೆ ಯಾವುದೇ ಹೆಸರಿಡಲು ತೀವ್ರ ವಿರೋಧವಿದೆ. ಈ ವಿಚಾರದಲ್ಲಿ ಕರ್ನಾಟಕದ ಜನತೆಯೂ ಸಹ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಜೆಡಿಎಸ್ ತಿಳಿಸಿದೆ.
ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲ ನಾಡಿಗಾಗಿ ಹೋರಾಡಿದ ಸಾವಿರಾರು ಕನ್ನಡಿಗ ಸಾಧಕರು ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದ ಮಹನೀಯರಿದ್ದಾರೆ. ಆ ಕನ್ನಡಿಗರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ಸಿದ್ದರಾಮಯ್ಯನವರೇ ಅಷ್ಟು ಅಭಿಮಾನ, ಗೌರವ ಇದ್ದರೆ ಮೈಸೂರಿನಲ್ಲಿ ನಿರ್ಮಿಸುತ್ತಿರುವ ನಿಮ್ಮ ಹೊಸ ಮನೆಗೆ ಮನಮೋಹನ್ ಸಿಂಗ್ ನಿವಾಸ ಎಂದು ಹೆಸರಿಟ್ಟು ಕೊಳ್ಳಿ. ನಿಮ್ಮ ಸೊಸೆಯ ಒಡೆತನದಲ್ಲಿರುವ ಬಹುಕೋಟಿ ಮೌಲ್ಯದ ಐಶಾರಾಮಿ ಕ್ಲಬ್ ಗೆ ಮರು ನಾಮಕರಣ ಮಾಡಿಕೊಳ್ಳಿ ಎಂದು ಜೆಡಿಎಸ್ ತಿರುಗೇಟು ನೀಡಿದೆ.
ದೆಹಲಿಯ ಹೊಸದಾಗಿ ನಿರ್ಮಿಸಿದ ಕಾಂಗ್ರೆಸ್ಕಚೇರಿಗೆ “ಇಂದಿರಾ ಭವನ”ಎಂದು ಹೆಸರಿಟ್ಟಿರಿ. ಅದಕ್ಕೆ ಮನಮೋಹನ್ಸಿಂಗ್ಹೆಸರಿಡಲು ಇಟಲಿ ಕಾಂಗ್ರೆಸ್ ನ ಆಪ್ತರ ಗುಂಪು ಒಪ್ಪಲಿಲ್ಲ ಎಂಬುದು ತಮಗೆ ತಿಳಿದಿರುವ ವಿಷಯ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ವಿರುವ ಕಾರಣ “ಗುಲಾಮಿ ಕಾಂಗ್ರೆಸ್” ನಾಯಕರು, ಬೆಂಗಳೂರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತೀರಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಈಗ ಬೆಂಗಳೂರು ವಿವಿಗೆ ಮನಮೋಹನ್ಸಿಂಗ್ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದ್ದೀರಿ. ಹೈಕಮಾಂಡ್ಗುಲಾಮಗಿರಿಗೆ ಸದಾ “ಸಿದ್ಧ”ರಾಮಯ್ಯ ಎಂದು ಜೆಡಿಎಸ್ ಟೀಕಿಸಿದೆ.