ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಸ್ಲಾಮಿನ ಪವಿತ್ರ ಗ್ರಂಥ ಕುರಾನ್ ನ ನಂಬಿಕೆಯ ಪ್ರಕಾರ ಇದು ದೇವನ ಅಂತಿಮ ದಿವ್ಯ ಮಾರ್ಗದರ್ಶನವಾಗಿದೆ. ಅದು ಪ್ರವಾದಿ ಮುಹಮ್ಮದ್ ರ ಮೂಲಕ ಮಾನವಕುಲಕ್ಕೆ ಪ್ರಕಟವಾಗಿದೆ.
ಇದರ ಮುಖ್ಯ ಉದ್ದೇಶ ಮಾನವನ ಜೀವನಕ್ಕೆ ನೈತಿಕತೆ, ನ್ಯಾಯ, ಕರುಣೆ ಮತ್ತು ದೇವಚಿಂತನೆಯ ಆಧಾರದ ಮೇಲೆ ಸರಿಯಾದ ದಿಕ್ಕನ್ನು ನೀಡುವುದಾಗಿದೆ. ಮಾನವನ ಅಸ್ತಿತ್ವ, ಕರ್ತವ್ಯ ಮತ್ತು ಅಂತಿಮ ಗುರಿ ಕುರಿತು ಆಳವಾದ ಮನನಕ್ಕೆ ಆಹ್ವಾನಿಸಿದೆ.
ಇದನ್ನ ಗಮನದಲ್ಲಿಟ್ಟು ತಮ್ಮ ನೆರೆಹೊರೆಯವರೊಂದಿಗೆ ಹ್ರುದಯ ವೈಶಾಲ್ಯತೆಯ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದೆ ಎಂದು ಮೌಲಾನಾ ಬಿಲಾಲ್ ಷರೀಫ್ ನಕ್ಷ್ ಬಂದಿ ಕಿನ್ಯಾ ರವರು ಹೇಳಿದರು.
ಅವರು ಶನಿವಾರ ಆದಿವಾಲ ಗ್ರಾಮದ ನಂದಿಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ನಿಮಿತ್ತದ ಸಾಮೂಹಿಕ ಪ್ರಾರ್ಥನೆಯ ನಂತರ ಈದ್ ಸಂದೇಶ ನೀಡಿ ಮಾತನಾಡಿದರು.
ದೇವರ ಏಕತ್ವ, ಮಾನವನ ನೈತಿಕ ಹೊಣೆಗಾರಿಕೆ, ಸಮಾಜದಲ್ಲಿ ನ್ಯಾಯ ಮತ್ತು ದಯೆಯ ಮೌಲ್ಯಗಳು, ಹಾಗೂ ಅಂತಿಮ ನ್ಯಾಯದ ದಿನದ ಕುರಿತಾಗಿಯೂ ಕುರಾನ್ ಅರಿವು ಮೂಡಿಸಿದೆ.
ಮಾನವ ಇತಿಹಾಸದಲ್ಲಿನ ಪ್ರವಾದಿಗಳಾದ ಇಬ್ರಾಹೀಮ್, ಮೂಸಾ, ಮತ್ತು ಈಸಾ ಅವರ ಜೀವನದ ಉದಾಹರಣೆಗಳ ಮೂಲಕ ಸತ್ಯ, ಧರ್ಮನಿಷ್ಠೆ ಮತ್ತು ಆತ್ಮಶುದ್ಧಿಯ ಮಾರ್ಗವನ್ನು ಸೂಚಿಸಿದೆ ಅ ದಿವ್ಯ ಮಾರ್ಗಗಳ ಮೂಲಕ ನಮ್ಮ ಜೀವನ ಕ್ರಿಯೆಗಳಲ್ಲಿ ಪವಿತ್ರತೆಯಿಂದ ಪಾಲಿಸಬೇಕಿದೆ ಕುರಾನ್ ಕೇವಲ ಧಾರ್ಮಿಕ ಗ್ರಂಥವಷ್ಟೇ ಅಲ್ಲ; ಮಾನವನ ಆತ್ಮಜ್ಞಾನವನ್ನು ಜಾಗೃತಗೊಳಿಸುವ, ಸೃಷ್ಟಿಯ ಅರ್ಥವನ್ನು ಮನನ ಮಾಡಲು ಪ್ರೇರೇಪಿಸುವ ಮತ್ತು ನೈತಿಕ-ಆಧ್ಯಾತ್ಮಿಕ ಜೀವನದ ದಾರಿಯನ್ನು ತೋರಿಸುವ ಜ್ಞಾನಮಾರ್ಗದರ್ಶಕವಾಗಿದೆ ಇಂತಹ ಅಮೂಲ್ಯವಾದ ಮಾರ್ಗದರ್ಶನಗಳು ನಮ್ಮ ಮುಂದಿವೆ ಎಂದರು.
ಒಂದು ತಿಂಗಳುಗಳ ಕಾಲ ಅತ್ಯಂತ ಕಠಿಣ ಕ್ರಿಯೆಗಳ ಮೂಲಕ ಉಪವಾಸ ಆಚರಿಸಿ ಸಕಲ ಜೀವರಾಶಿಗಳಿಗೂ ಅಲ್ಲಾಹನ ಅನುಗ್ರಹಕ್ಕಾಗಿ ಪ್ರಾರ್ಥಿಸಿಲಾಗಿದೆ ನಮ್ಮ ಸಂಕಲ್ಪಗಳು ನೈಜತೆಯಿಂದ ಕೂಡಿರಬೇಕು ಸಾಮೂಹಿಕ ಚಿಂತನೆ ಸಹಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಬಾಂಧವ್ಯಗಳು ಗಟ್ಟಿಗೊಳಿಸಬೇಕು ಎಂದರು.
ಹಾಜಿ ಐ ಬರ್ಕತ್ ಅಲಿ, ಷಫಿಉಲ್ಲಾ, ಫಿರ್ಧೋಸ್, ಆಸಿಫ್ ಅಲಿ, ಖಾದರ್ ಸಾಬ್, ಜೈನುಲ್ಲಾಬ್ದೀನ್ ಸಾಬ್, ಚಮನ್ ಷರೀಫ್, ಇಸ್ಮಾಯಿಲ್, ಸುಭಾನ್ ಖಾನ್, ಮಹಮದ್ ಅಲಿ ಸೇರಿದಂತೆ ಅನೇಕರು ಇದ್ದರು.
“ಪವಿತ್ರ ರಮಝಾನ್ ತಿಂಗಳ ಉಪವಾಸ ಮುಗಿದ ಬಳಿಕ ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸುವ ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ಆದಿವಾಲ ಗ್ರಾಮದ ಈದ್ಗಾ ಮೈದಾನದಲ್ಲಿ ಆಚರಿಸಲಾಯಿತು”. ಹಜರತ್ ಬಿಲಾಲ್ ಷರೀಫ್ ನಕ್ಷ್ ಬಂದಿ ಕಿನ್ಯಾ ರವರು ನೆರೆದಿದ್ದ ಜನರನ್ನು ಉದ್ದೇಶಿಸಿ ಈದುಲ್ ಫಿತ್ರ್ ಸಂದೇಶ ನೀಡಿದರು.

