ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ):
ನಗರದ ಪೂಣ್ಯಮೂರ್ತಿ ವೃತ್ತದ ಬಳಿಯಿರುವ ಹಳೇಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು ಎಸ್ಬಿಐನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರರಾವ್ ರಿಬ್ಬನ್ ಕತ್ತರಿಸುವ ಮೂಲಕ ನೂತನವಾಗಿ ಬುಧವಾರ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಮತ್ತು ಯುವತಿಯರು ಸ್ವಾವಲಂಬಿಯಾಗಿ ಸ್ವಯಂಉದ್ಯೋಗವನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸ್ವಯಂ ಉದ್ಯೋಗ ತರಬೇತಿ ಕೇಂದ್ರದಿಂದ ಸಹಕಾರಿಯಾಗಿದೆ.
ತರಬೇತಿ ಸಂಸ್ಥೆಯಲ್ಲಿ ವಿಜಯನಗರದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿಗಳಾದ ಮಹಿಳಾ ಮತ್ತು ಪುರುಷರ ಹೊಲಿಗೆ ತರಬೇತಿ, ಜ್ಯೂಟ್ ಬ್ಯಾಗ್ ತಯಾರಿಕೆ, ಅಗರ ಬತ್ತಿ ತಯಾರಿಕೆ, ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ಸೆಟ್ ರಿಪೇರಿ, ಮೊಬೈಲ್ ರಿಪೇರಿ ಸೇರಿದಂತೆ ವಿವಿಧ ತರಬೇತಿಗಳನ್ನು ಆಸಕ್ತ ಯುವಕ, ಯುವತಿಯರಿಗೆ ನೀಡಲಾಗುವುದು. ತರಬೇತಿ ಸಂಸ್ಥೆಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಈ ಭಾಗದ ನಿರುದ್ಯೋಗಿ ಯುವಕ, ಯುವತಿಯರು ಸ್ವಯಂ ಉದ್ಯೋಗ ಸೃಷ್ಟಿಕೊಳ್ಳಬೇಕಿದೆ ಎಂದರು.
ಈ ವೇಳೆ ಹೊಸಪೇಟೆ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಅಮೀತ್ ಗೋಯಲ್,
ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಗಿರಿಧಾರಿ, ಸಹಾಯಕ ವ್ಯವಸ್ಥಾಪಕ ಧನಂಜಯ, ವ್ಯವಸ್ಥಾಪಕ ಈರಣ್ಣ, ಸಿಬ್ಬಂದಿ ಲಕ್ಷ್ಮೀಕಾಂತ ಇತರರಿದ್ದರು.