ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
“ರಾಷ್ಟ್ರಸೇವೆಯ ದೀಕ್ಷೆ, ಅಂತ್ಯೋದಯದ ದೃಢ ಸಂಕಲ್ಪ ಮತ್ತು ಕೋಟ್ಯಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯೇ ಭಾರತೀಯ ಜನತಾ ಪಾರ್ಟಿಯ ಅಡಿಪಾಯ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಣ್ಣಿಸಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ವಿಜಯದ ಸಂಕಲ್ಪದೊಂದಿಗೆ ಸಿದ್ಧಾಂತ ಹಾಗೂ ಜನಸೇವೆಯ ಪಥದಲ್ಲಿ ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಹಿರಿಯ ಚೇತನಗಳಿಗೆ ಗೌರವ ಸಮರ್ಪಣೆ-
ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಹಿರಿಯರನ್ನು ಸ್ಮರಿಸಿದ ವಿಜಯೇಂದ್ರ ಅವರು, ಜನಸಂಘದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಾದ ಸೋಮನಾಥಯ್ಯ, ವೈ. ಮಲ್ಲೇಶ್, ಶಂಕರನಾರಾಯಣ, ಭೂದಾಳ್ ವೀರಭದ್ರಪ್ಪ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು. ಇಂತಹ ಹಿರಿಯ ಕಾರ್ಯಕರ್ತರ ಪರಿಶ್ರಮವೇ ಇಂದು ಬಿಜೆಪಿ ಹೊಂದಿರುವ ಶಕ್ತಿಗೆ ಮೂಲ ಕಾರಣ ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರುಗಳಾದ ಜಿ.ಎಂ. ಸಿದ್ದೇಶ್ವರ್ (ಮಾಜಿ ಕೇಂದ್ರ ಸಚಿವರು), ಛಲವಾದಿ ನಾರಾಯಣಸ್ವಾಮಿ (ವಿಧಾನ ಪರಿಷತ್ ವಿಪಕ್ಷ ನಾಯಕರು), ಎಸ್.ಎ. ರವೀಂದ್ರನಾಥ್ (ಹಿರಿಯರು, ಮಾಜಿ ಶಾಸಕರು), ಎಂ.ಪಿ. ರೇಣುಕಾಚಾರ್ಯ (ಮಾಜಿ ಸಚಿವರು), ರಾಜಶೇಖರ್ ನಾಗಪ್ಪ (ಜಿಲ್ಲಾಧ್ಯಕ್ಷರು), ಶಾಸಕರುಗಳಾದ ಬಿ.ಪಿ. ಹರೀಶ್, ಶ್ರೀವತ್ಸ, ನವೀನ್, ಮಾಜಿ ಶಾಸಕರಾದ ಬಸವರಾಜ ನಾಯ್ಕ್, ಶಿವಯೋಗಿಸ್ವಾಮಿ ಹಾಗೂ ಪ್ರಮುಖರಾದ ಎಸ್.ವಿ. ರಾಮಚಂದ್ರ, ಮಾಡಾಳ್ ಮಲ್ಲಿಕಾರ್ಜುನ ಸೇರಿದಂತೆ ಅನೇಕ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
”ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಮತ್ತು ಆಶೀರ್ವದಿಸುತ್ತಾ ಬಂದಿರುವ ಸಮಸ್ತ ನಾಗರಿಕರಿಗೂ ಬಿಜೆಪಿ ಸ್ಥಾಪನಾ ದಿನದ ಹಾರ್ದಿಕ ಶುಭಕಾಮನೆಗಳು.” ಬಿ.ವೈ. ವಿಜಯೇಂದ್ರ.

