ಪೌರ ಕಾರ್ಮಿಕರ ಜೊತೆ ಸಹ ಪಂಕ್ತಿ ಭೋಜನ ಸವಿದ ಬಿಜೆಪಿ ಮುಖಂಡರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹನ್ನೆರೆಡನೆ ಶತಮಾನದ ಬಸವಣ್ಣನವರ ತತ್ವ ಸಿದ್ದಾಂತಗಳ ಮೇಲೆ ಆಡಳಿತ ನಡೆಸುತ್ತಿರುವ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ ಪೌರ ಕಾರ್ಮಿಕರ ಪಾದ ತೊಳೆದು ಯಾರು ಮೇಲು
, ಕೀಳಲ್ಲ ಎನ್ನುವ ಸಂದೇಶವನ್ನು ಇಡಿ ವಿಶ್ವಕ್ಕೆ ಸಾರಿದ್ದಾರೆಂದು ಸಂಸದ ಗೋವಿಂದ ಕಾರಜೋಳ ಸಂತಸ ವ್ಯಕ್ತಪಡಿಸಿದರು.

೭೬ ನೇ ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಗೌರವ ಅಭಿಯಾನ ಪ್ರಯುಕ್ತ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್‌ರವರ ನಿವಾಸದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಹ ಪಂಕ್ತಿ ಭೋಜನ ಉದ್ಗಾಟಿಸಿ ಮಾತನಾಡಿದರು.

- Advertisement - 

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ನಂತರ ದೇಶದಲ್ಲಿ ಭೀಮ ಸಂಗಮ ನಡೆಯುತ್ತಿದೆ. ಸಂವಿಧಾನಕ್ಕೆ ನಿಜವಾದ ಗೌರವ ಕೊಟ್ಟವರು ಪ್ರಧಾನಿ ನರೇಂದ್ರಮೋದಿರವರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಡಿ ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಫಲವಾಗಿ ಚಹ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಜಾತಿ ಬೇಧ, ಮೇಲು-ಕೀಳೆಂಬ ತಾರತಮ್ಯ ನಿವಾರಣೆಯಾಗಬೇಕೆಂಬ ಉದ್ದೇಶದಿಂದ ದೇಶಾದ್ಯಂತ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುತ್ತಿದೆ.

ರಾಜ್ಯ ಸರ್ಕಾರ ಐದು ಉಚಿತ ಗ್ಯಾರೆಂಟಿಗಳನ್ನು ನೀಡಿ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇಂತಹ ಬಿಟ್ಟಿ ಭಾಗ್ಯಗಳನ್ನು ಜನ ಎಲ್ಲಿಯವರೆಗೂ ತಿರಸ್ಕರಿಸುವುದಿಲ್ಲವೋ ಅಲ್ಲಿಯತನಕ ಉದ್ದಾರ ಸಾಧ್ಯವಿಲ್ಲ. ಬಿ.ಎಸ್.ಯಡಿಯೂರಪ್ಪ, ಬಸವರಾಜ್‌ಬೊಮ್ಮಾಯಿ ಇವರುಗಳು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ೨೪ ಸಾವಿರ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ಜೀವನ ಭದ್ರತೆ ಕೊಟ್ಟಿದ್ದನ್ನು ಸಂಸದ ಗೋವಿಂದ ಕಾರಜೋಳ ಸ್ಮರಿಸಿದರು.

- Advertisement - 

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಭಾರತಕ್ಕೆ ಭದ್ರವಾದ ಸಂವಿಧಾನ ಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಗೌರವಿಸಬೇಕೆಂಬ ಉದ್ದೇಶದಿಂದ ದೇಶದ ಪ್ರಧಾನಿ ನರೇಂದ್ರಮೋದಿರವರು ಭೀಮ ಸಂಗಮದ ಮೂಲಕ ಪೌರ ಕಾರ್ಮಿಕರ ಜೊತೆ ಸಹ ಪಂಕ್ತಿ ಭೋಜನ ಸವಿಯುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಮ್ಮ ನಿವಾಸದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರೊಂದಿಗೆ ಊಟ ಮಾಡುತ್ತಿದ್ದೇವೆ. ಇಡಿ ವಿಶ್ವದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಪ್ರಧಾನಿ ಯಾರಾದರು ಇದ್ದರೆ ಅದು ನಮ್ಮ ದೇಶದ ನರೇಂದ್ರಮೋದಿರವರು ಎಂದು ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರದಿಂದ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ಕೊಡಿಸುವುದಾಗಿ ಕೆ.ಎಸ್.ನವೀನ್ ಭರವಸೆ ನೀಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳು ಸಫಲವಾಗಬೇಕಾದರೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ನಮ್ಮ ದೇಶಕ್ಕೆ ಪವಿತ್ರವಾದ ಗ್ರಂಥ ಯಾವುದಾದರೂ ಇದ್ದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ.

ಅದರಡಿಯಲ್ಲಿ ಎಲ್ಲಾ ಜಾತಿ, ಧರ್ಮದವರು ಸಮಾನವಾಗಿ ಬದುಕುತ್ತಿದ್ದೇವೆ. ದಿನ ಬೆಳಗಾದರೆ ನಗರವನ್ನು ಸ್ವಚ್ಚಗೊಳಿಸುವ ಪೌರ ಕಾರ್ಮಿಕರನ್ನು ಕೇವಲವಾಗಿ ನೋಡದೆ ಗೌರವದಿಂದ ನಡೆಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಪ್ರಧಾನಿ ಮೋದಿರವರು ಪಾದ ತೊಳೆಯುವ ಮೂಲಕ ಸಂವಿಧಾನ ಗೌರವ ಅಭಿಯಾನ ಭೀಮ ಸಂಗಮಕ್ಕೆ ಕರೆ ನೀಡಿದ್ದಾರೆಂದರು.

ಮೊಳಕಾಲ್ಮುರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ. ಸರ್ಕಾರ ಅಧಿಕಾರದಲ್ಲಿದ್ದಾಗ ಪೌರ ಕಾರ್ಮಿಕರ ಸೇವೆಯನ್ನು ಗೌರವಿಸಿ ಖಾಯಂಗೊಳಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಅನೇಕ ಸೌಲಭ್ಯಗಳನ್ನು ನಮ್ಮ ಪಕ್ಷ ಕೊಟ್ಟರೂ ಚುನಾವಣೆಯಲ್ಲಿ ಆಸೆ ಆಮಿಷಗಳಿಗೆ ಬಲಿಯಾಗಿ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ದ ಮತ ಚಲಾವಣೆ ಮಾಡುವುದು ತಪ್ಪು. ಪ್ರತಿ ಮಂಡಲ ಮಟ್ಟದಲ್ಲಿ ಭೀಮ ಸಂಗಮ ನಡೆಯಬೇಕು ಎಂದು ಹೇಳಿದರು.

ಪೌರ ಕಾರ್ಮಿಕ ಮೋಹನ್ ವೇದಿಕೆಯಲ್ಲಿದ್ದರು. ಬಿಜೆಪಿ ಯುವ ಮುಖಂಡ ಜಿ.ಎಂ.ಅನಿತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇದ್ರೆ, ಬಿ.ಸಿ.ಹನುಮಂತೆಗೌಡ, ಕೆ.ಟಿ.ಕುಮಾರಸ್ವಾಮಿ, ಜಯಪಾಲಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಮೋಹನ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Share This Article
error: Content is protected !!
";