ರಾಣಿಕೆರೆಗೆ ಯದುವೀರ್ ಒಡೆಯರ್ ಅವರಿಂದ ಬಾಗಿನ ಅರ್ಪಣೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಷ್ಟ್ರದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದು
, ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರು, ರೈತರು, ಕೂಲಿಕಾರರೂ ಸೇರಿದಂತೆ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ಧಾರೆ.

ಮೋದಿಯವರ ದಕ್ಷ, ಪ್ರಾಮಾಣಿಕ ಆಡಳಿತದ ಫಲವಾಗಿ ೨೦೪೭ರಷ್ಟಲ್ಲಿ ನಾವೆಲ್ಲರೂ ವಿಕಸಿತ, ಸೂಪರ್‌ಪಾಸ್ಟ್ ಭಾರತವನ್ನು ಹೊಂದಲಿದ್ದು ಇಡೀ ವಿಶ್ವಕ್ಕೆ ಮಾದರಿಯಾಗುವ ಮೂಲಕ ನೂರಾರು ಕೋಟಿ ಭಾರತೀಯ ನೂರಾರು ವರ್ಷಗಳ ಕನಸು ನನಸಾಗಲಿದೆ ಎಂದು ಮೈಸೂರು ರಾಜವಂಶಸ್ಥರು, ಪ್ರಸ್ತುತ ಮೈಸೂರು-ಕೊಡಗು ಲೋಕಸಭಾ ಸದಸ್ಯ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

- Advertisement - 

ಅವರು, ಮಂಗಳವಾರ ತಾಲ್ಲೂಕಿನ ಮೀರಸಾಬಿಹಳ್ಳಿಯ ರಾಣಿಕೆರೆಗೆ ಭೇಟಿ ನೀಡಿ ಗಂಗಾ ಪೂಜೆ ನೆರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಿರೀಕ್ಷೆಗೂ ಮೀರಿ ಸೇರಿದ್ದ ಜನರನ್ನು ಕಂಡು ಪುಳಕಿತರಾದ ಮೈಸೂರಿನ ರಾಜಮನತನವೆಂದರೆ ಜನರ ಕಲ್ಯಾಣಕ್ಕಾಗಿ, ಜನರ ಸರ್ವತೋಮುಖ ಅಭಿವೃದ್ದಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವ ವ್ಯಕ್ತಿಗಳು ಎಂಬ ನಂಬಿಕೆ ಇಂದಿಗೂ ಜನರಲ್ಲಿದೆ.

ಮಹಾರಾಜರ ಮೇಲಿದ್ದ ಪ್ರೀತಿ, ವಿಶ್ವಾಸ, ಗೌರವಕ್ಕೆ ಎಂದೂ ಧಕ್ಕೆಯಾಗಿಲ್ಲ. ಇಂದಿಗೂ ಈ ನಾಡಿನ ಜನತೆ ನನ್ನನ್ನು ಸಂಸದ ಎಂದು ಕರೆಯದೆ ನಮ್ಮ ಮೈಸೂರಿನ  ಮಹಾರಾಜರು ಎಂದು ಆತ್ಮಾಭಿಮಾನದಿಂದ ನುಡಿಯುತ್ತಾರೆ. ಇದಕ್ಕಿಂತ ಸಂತೋಷ ಬೇರಿಲ್ಲ. ಮುಂದಿನ ದಿನಗಳಲ್ಲೂ ನಮ್ಮ ಮನೆತನ ಈ ನಾಡಿನ ಜನರ ಕಲ್ಯಾಣಕ್ಕಾಗಿ ಶ್ರಮಿಸಲಿದೆ. ಜನರು ರಾಜಮನೆತನದ ಮೇಲಿಟ್ಟ ಪ್ರೀತಿ, ವಿಶ್ವಾಸ, ಗೌರವಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.

- Advertisement - 

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮೈಸೂರಿನ ರಾಜಮನೆತನಕ್ಕೆ ಹಳ್ಳಿಗಳು, ಹಳ್ಳಿಯ ಜನರು ಎಂದರೆ ಪ್ರಾಣ. ಮೈಸೂರಿನ ಕೃಷ್ಣರಾಜಸಾಗರಕ್ಕೆ ಡ್ಯಾಂ ನಿರ್ಮಿಸಿದ ನಂತರ ಮಹರಾಜರು ರಾಜ್ಯದ ಹಲವಾರು ಚಿಕ್ಕಪುಟ್ಟ ಕೆರೆಗಳಿಗೆ ಡ್ಯಾಂ ನಿರ್ಮಿಸಿ ಜನರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು. ಯಾವುದೇ ಪ್ರಚಾರವಿಲ್ಲದೆ ಮಹರಾಜರ ವಂಶ ಜನರ ಕಲ್ಯಾಣಕ್ಕಾಗಿ ದುಡಿದಿದೆ. ವಿಶೇಷವೆಂದರೆ ಈ ಕೆರೆಗೆ ಒಮ್ಮೆ ಜಯಚಾಮರಾಜೇಂದ್ರ ಒಡೆಯರ್, ರಾಣಿ ಪ್ರಮೋದದೇವಿ ಆಗಮಿಸಿದ್ದರು.

ಈಗ ಮತ್ತೊಮ್ಮೆ ಯಧುವೀರ ಆಗಮಿಸುವ ಮೂಲಕ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದ್ಧಾರೆ. ೧೯೦೭ರಲ್ಲಿ ಈ ಕೆರೆ ನಿರ್ಮಿಸಿ ಈ ಭಾಗದ ಸುಮಾರು ೬೦ಕ್ಕೂ ಹೆಚ್ಚು ಗ್ರಾಮಗಳ ಹತ್ತಾರು ಸಾವಿರ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಿದ್ದಾರೆ. ಕೆರೆಗೆ ಆಗಮಿಸಿ ಗಂಗಾಪೂಜೆ ಮಾಡಿಸಬೇಕೆಂಬುವ ಈ ಭಾಗದ ಜನರ ಬೇಡಿಕೆಗೆ ಮನ್ನಣೆ ನೀಡಿ ಯಧುವೀರ್ ಒಡೆಯರ್ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಮ್ಮ, ಸದಸ್ಯರಾದ ನಾಗರಾಜ, ಪಿಡಿಒ ವಿಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಬಿಜೆಪಿ ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಎನ್.ರಘುಮೂರ್ತಿ, ಟಿ.ಮಂಜುನಾಥ, ಡಿ.ಭರತೇಶ್‌ರೆಡ್ಡಿ, ದೊರೆನಾಗರಾಜು, ಬಂಡೆರಂಗಪ್ಪ, ಶಶಿಧರ ರೈತ ಮುಖಂಡ ಎಂ.ಎನ್.ಚನ್ನಕೇಶವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

 

 

Share This Article
error: Content is protected !!
";