ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಮಡಿವಾಳ ಎಂದು ಬರೆಸುವಂತೆ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಹಿಂದುಳಿದಿರುವ ನಮ್ಮ ಸಮಾಜದವರು ಹಿಂದುಳಿದ ವರ್ಗಗಳ ಆಯೋಗದವರು ಪ್ರತಿ ಮನೆ ಮನೆಗೆ ಸಮೀಕ್ಷೆಗೆ ಬಂದಾಗ ಮಡಿವಾಳ ಎಂದೆ ಬರೆಸಬೇಕು.
ಅಗಸ, ಪರಿಟ, ಚಾಕಲ, ದೋಬಿ ರಜಕ ಹೀಗೆ ಬೇರೆ ಬೇರೆ ಹೆಸರುಗಳನ್ನು ಸಮೀಕ್ಷೆಯಲ್ಲಿ ಬರೆಸಬಾರದು. ೯ ನೇ ಕಾಲಂನಲ್ಲಿ ಜಾತಿ ಮಡಿವಾಳವೆಂದು ನಮೂದಿಸುವಂತೆ ಜಾಗೃತಿಗೊಳಿಸಿದರು.
ಮಡಿವಾಳರು ತಮ್ಮ ಸ್ಥಿತಿಗತಿಗನುಗುಣವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಉಪ ಜಾತಿಗಳನ್ನು ಬರೆಸಬೇಡಿ. ಮಡಿವಾಳ ಎಂದು ನಮೂದಿಸಿ ಕ್ರಿಶ್ಚಿಯನ್ ಮಡಿವಾಳ ಎನ್ನುವುದಕ್ಕೆ ನಮ್ಮ ಆಕ್ಷೇಪಣೆಯಿದೆ. ಈ ಪದವನ್ನು ರದ್ದುಗೊಳಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದ್ದೇವೆಂದು ಸಿ.ನಂಜಪ್ಪ ಹೇಳಿದರು.
ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಗೌರವಾಧ್ಯಕ್ಷ ಈರಣ್ಣ ಮಡಿವಾಳ, ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಕಾರ್ಯಾಧ್ಯಕ್ಷ ಹೆಚ್.ಸಿದ್ದಗಂಗಯ್ಯ, ಜಿಲ್ಲಾಧ್ಯಕ್ಷ ಟಿ.ರಮೇಶ್, ಖಜಾಂಚಿ ಮಂಜುನಾಥ್ ಆರ್. ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನಗರಸಭೆ ನೂತನ ಅಧ್ಯಕ್ಷೆ ಎಂ.ಪಿ.ಅನಿತಾ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

