ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ವರಿಗೂ ನ್ಯಾಯ- ನಮ್ಮ ಧ್ಯೇಯ ಜಾತಿ ಜನಗಣತಿ ದತ್ತಾಂಶವು ಸುಮಾರು 10 ವರ್ಷ ಹಳೆಯದಾಗಿರುವುದರಿಂದ ಪ್ರತಿಯೊಂದು ವರ್ಗದ ಪ್ರಮುಖರಿಗೂ ಈ ಬಗ್ಗೆ ಮಾತನಾಡಲು ಅವಕಾಶವನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸುವಂತೆ ವರಿಷ್ಠರು ಸಲಹೆ ನೀಡಿದ್ದಾರೆ.
ಹೀಗಾಗಿ ಯಾವ ವರ್ಗದವರಿಂದಲೂ ಸಣ್ಣ ಅಪಸ್ವರ ಬಾರದಂತೆ, ಯಾರಿಗೂ ಅನ್ಯಾಯ ಆಗದಂತೆ ಅವಕಾಶವನ್ನು ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಮತ್ತೊಮ್ಮೆ ಜಾತಿ ಗಣತಿಗೆ ಅವಕಾಶ ನೀಡಲು ಹಾಗೂ ಆನ್ಲೈನ್ ಮೂಲಕವೂ ಅವಕಾಶ ಕಲ್ಪಿಸಲು ಒಂದು ದಿನಾಂಕವನ್ನು ನಿರ್ಧರಿಸುತ್ತೇವೆ.
ಈ ಬಾರಿ ಮತ್ತೊಂದು ಸುವರ್ಣಾವಕಾಶ ನೀಡುತ್ತಿದ್ದೇವೆ, ಎಲ್ಲರೂ ಅವರ ಜಾತಿಯ ಗುರುತನ್ನು ನ್ಯಾಯಬದ್ಧವಾಗಿ ಸಮೀಕ್ಷಾ ತಂಡಕ್ಕೆ ನೀಡಬೇಕು. ಗಣತಿ ಎನ್ನುವುದು ಸುದೀರ್ಘ ಪ್ರಕ್ರಿಯೆ. ಯಾವಾಗಿನಿಂದ ಗಣತಿ ಆರಂಭವಾಗಲಿದೆ, ಹೇಗೆ ನಡೆಯಲಿದೆ ಎಂಬ ಬಗ್ಗೆ ಶೀಘ್ರವೇ ಮಾಹಿತಿ ಒದಗಿಸುತ್ತೇವೆ ಎಂದು ಡಿಸಿಎಂ ತಿಳಿಸಿದರು.
ಇನ್ನು, ಬೆಂಗಳೂರಿನಲ್ಲಿ ಆರ್ಸಿಬಿ ಸಂಭ್ರಮದ ವೇಳೆ ನಡೆದ ದುರ್ಘಟನೆ ಸೇರಿದಂತೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ನಾನು ಮತ್ತು ಮುಖ್ಯಮಂತ್ರಿಗಳು ಸೇರಿ ವರಿಷ್ಠರೊಂದಿಗೆ ಚರ್ಚಿಸಿದ್ದೇವೆ. ಘಟನೆ ಬಳಿಕ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಅವರು ಪ್ರತಿಕ್ರಿಯೆ ನೀಡಿದರು.