ಭದ್ರಾ ಯೋಜನೆಗೆ ಕೇಂದ್ರದ ಅನುದಾನ ಕಡಿತ ಸಾಧ್ಯತೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆಗೆ ಯೋಜನೆಗೆ ಕೇಂದ್ರದ ಘೋಷಿತ 5300 ಕೋಟಿ ರೂ ಅನುದಾನದಲ್ಲಿ 1754 ಕೋಟಿ ರೂ ಖೋತ ಆಗುವ ಸಾಧ್ಯತೆ ಇದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಮುಖಂಡ ಜೆ.ಯಾದವರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

 ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಕ್ಟೋಬರ್ 28 ರಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ ಮರು ಪ್ರಸ್ತಾವನೆ  ಸಂಗತಿಯ ದೃಢ ಪಡಿಸಿದೆ.  ಮರು ಪ್ರಸ್ತಾವನೆಯಲ್ಲಿ 3546.22 ಕೋಟಿ ರೂಪಾಯಿ ಅನುದಾನದ ನೆರವು ಕೋರಲಾಗಿದೆ. ಹಾಗಾಗಿ ಘೋಷಿತ 5300 ಕೋಟಿ ರೂ ನಲ್ಲಿ  1754 ಕೋಟಿ ರೂ ಖೋತವಾಗಲಿದೆ. ಅನುದಾನ ಖೋತವಾಗುವ ಸಂಗತಿಯ ಸಮಿತಿ ಮೊದಲೇ ಗ್ರಹಿಸಿತ್ತು ಎಂದರು.

    ಭದ್ರಾ ಮೇಲ್ದಂಡೆಗೆ ಕೇಂದ್ರದ 2023-24 ನೇ ಸಾಲಿನ ಬಜೆಟ್ ನಲ್ಲಿ 5300 ಕೋಟಿ ರೂ ಅನುದಾನ  ಘೋಷಣೆ ಮಾಡಲಾಗಿತ್ತು. ಅನುದಾನ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿತ್ತು. ಏತನ್ಮಧ್ಯೆ ಕಳೆದ  ಸೆಪ್ಟಂಬರ್ 5 ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ  ಪತ್ರ ಬರೆದು ಅನುದಾನ ಬಿಡುಗಡೆಗೆ  ಆಕ್ಷೇಪಣೆ ವ್ಯಕ್ತಪಡಿಸಿ ಕೆಲ ತಾಂತ್ರಿಕ ಮಾಹಿತಿ ಕೋರಿದ್ದರು.

ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ  ವೆಚ್ಚ, ಯೋಜನೆ ಪೂರ್ಣಗೊಳಿಸಲು ಬೇಕಾದ  ಬಾಕಿ ಮೊತ್ತ, ಭೌಗೋಳಿಕ ಹಂಚಿಕೆ ಹಾಗೂ ಹಣಕಾಸು ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂಗತಿಯ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

   ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲು ಕೇಂದ್ರ ನಿರ್ಧರಿಸುವಾಗಲೇ ಎಲ್ಲ ತಾಂತ್ರಿಕ ಮಾಹಿತಿ ರಾಜ್ಯ ಸರ್ಕಾರ ಪೂರೈಕೆ ಮಾಡಿತ್ತು. ಯಾವುದೇ ಬಾಕಿ ಇರಲಿಲ್ಲ. ದೇಬರ್ಶಿ ಮುಖರ್ಜಿ ಬರೆದ ಪತ್ರ ಅನುದಾನ ಬಿಡುಗಡೆಗೆ ಕೇ್ಂದ್ರ ಮಾಡುತ್ತಿರುವ ಖ್ಯಾತೆ ಹಾಗೂ ಕಾಲ ಹರಣ ಮಾಡುವುದಾಗಿದೆ ಎಂಬುದು ವೇದ್ಯವಾಗಿತ್ತೆಂದು ಯಾದವರೆಡ್ಡಿ ಆರೋಪಿಸಿದರು.

      ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ಬರೆದ ಪತ್ರಕ್ಕೆ ಅಕ್ಟೋಬರ್ 28ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹರ್ಷ ಗುಪ್ತ ಸಲ್ಲಿಸಿರುವ ಮರು ಪ್ರಸ್ತಾವನೆ   ಅನುಸಾರ  1754 ಕೋಟಿ ರೂ ಖೋತವಾಗುತ್ತದೆ.

ಮಾರ್ಚ್ 2022 ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ 5300 ಕೋಟಿ ರು ಕೇಂದ್ರದಿಂದ ಲಭ್ಯವಾಗಬೇಕಿತ್ತು. ಅಂದರೆ   14697 ಕೋಟಿ ರೂಪಾಯಿ ಒಟ್ಟಾರೆ ಯೋಜನಾ ವೆಚ್ಚದಲ್ಲಿ 5528 ಕೋಟಿ ರೂಪಾಯಿಯಷ್ಟು ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ  9168 ಕೋಟಿ ರುಪಾಯಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60 ರಷ್ಟು ಮೊತ್ತ  5501 ಕೋಟಿ  ಕೊಡಬೇಕಾಗಿದ್ದು ಅದನ್ನು 5300 ಕೋಟಿಗೆ ಸೀಮಿತಗೊಳಿಸಲಾಗಿತ್ತು.

     ಹಾಲಿ ಕೇಂದ್ರ ಸಲ್ಲಿಸಲಾದ ಮರು ಪ್ರಸ್ತಾವನೆಯಲ್ಲಿ ಮಾರ್ಚ್ 2024 ರವರೆಗೆ ಖರ್ಚು ಮಾಡಲಾದ ಮಾಹಿತಿ ಸಲ್ಲಿಸಲಾಗಿದೆ.  ಮಾರ್ಚ್ ಅಂತ್ಯಕ್ಕೆ ಭದ್ರಾ ಮೇಲ್ದಂಡೆಗೆ  8785 ಕೋಟಿ ರೂ ಖರ್ಚು ಮಾಡಲಾಗಿದ್ದು 5910 ಕೋಟಿ ರುಪಾಯಿ ಬಾಕಿ ಉಳಿಯುತ್ತದೆ.  

ಮೊತ್ತಕ್ಕೆ ಶೇ.60 ರಷ್ಟು ಅನುದಾನವ ಕೇಂದ್ರ ಸರ್ಕಾರ ನೀಡಿದ್ದಲ್ಲಿ 3546 ಕೋಟಿ ರು ಮಾತ್ರ ಲಭ್ಯವಾಗುತ್ತದೆ.  ಕೇವಲ ಎರಡು ವರ್ಷಕ್ಕೆ 1754 ಕೋಟಿ ರೂ ಖೋತವಾಗುತ್ತದೆ. ಕೇಂದ್ರ ಸರ್ಕಾರದ ಸೂಚನೆ ಪಾಲನೆ ಸಂಬಂಧ  ರಾಜ್ಯ ಸಲ್ಲಿಸಿರುವ ಪ್ರಸ್ತಾವನೆ ಕೊಟ್ಟಷ್ಟು ಕೊಡಲಿ ಎಂಬಂತಿದೆ ಎಂದು ಯಾದವರೆಡ್ಡಿ ದೂರಿದರು.

ಭದ್ರಾ ಮೇಲ್ದಂಡೆ ವಿಚಾರವಾಗಿ ರಾಜ್ಯದ ಯಾರೊಬ್ಬ  ಕೇಂದ್ರ ಸಚಿವರು ಹಾಗೂ  ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಮುಂದೆ ನಿಂತು ಮಾತನಾಡುವ  ಪರಿಸ್ಥಿತಿಯಿಲ್ಲ. ಸಚಿವರುಗಳಿಗೆ ಪ್ರಧಾನಿಯವರ ಭೇಟಿಗೆ ಟೈಂ ಸಿಗುತ್ತಿಲ್ಲ. ಕಳೆದ ತಿಂಗಳು ಚಿತ್ರದುರ್ಗಕ್ಕೆ ಆಗಮಿಸಿದ್ದ ಜಲಶಕ್ತಿಯ ರಾಜ್ಯ ಸಚಿವ ವಿ.ಸೋಮಣ್ಣ,  ನೀರಾವರಿ ಅನುಷ್ಢಾನ ಸಮಿತಿಯೊಂದಿಗೆ ಸಭೆ ನಡೆಸಿ ಒಂದುವರೆ ತಿಂಗಳ ಒಳಗಾಗಿ  ಕೇಂದ್ರದಿಂದ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿ ಹೋಗಿದ್ದರು.

ಗಡುವು ಹತ್ತಿರ ಬಂದಿದೆ. ಈಗಲಾದರೂ ರಾಜ್ಯದ ಬಿಜೆಪಿ ಸಂಸದರು ದಿವ್ಯ ನಿರ್ಲಕ್ಷ್ಯದಿಂದ ಹೊರ ಬಂದು ಕೇಂದ್ರದಿಂದ ಭದ್ರಾ ಮೇಲ್ಡಂಡೆಗೆ ಅನುದಾನ ಬಿಡುಗಡೆ ಮಾಡಿಸುವುದರ ಮೂಲಕ ಇಚ್ಚಾಶಕ್ತಿ ಪ್ರದರ್ಶಿಸಲಿ. ಜನತಂತ್ರ ವ್ಯವಸ್ಥೆ ಬದ್ದತೆ ಅರಿತುಕೊಳ್ಳಲಿ ಎಂದು ಯಾದವರೆ್ಡ್ಡಿ ಆಗ್ರಹಿಸಿದರು.

    ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

Share This Article
error: Content is protected !!
";