ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಒ ಅನುರಾಧ ಕೆ ಎನ್ ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದಾರೆ.
ಹಾಲಿ ಜಿಲ್ಲಾಧಿಕಾರಿ ಬಸವರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಅಚ್ಚರಿ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೇ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಈ ಜಾಗಕ್ಕೆ ಇದೀಗ ಸಚಿವ ಆಪ್ತ ಕಾರ್ಯದರ್ಶಿ ಸಿಇಒ ಆಗಿದ್ದ ಅನುರಾಧ ಅವರನ್ನೇ ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಸಚಿವರ ಆಪ್ತ ಕಾರ್ಯದರ್ಶಿಗೆ ಎರಡು ಹುದ್ದೆ-
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಿಇಒ ಕೆ ಎನ್ ಅನುರಾಧ ಅವರು ಎರಡೂವರೆ ವರ್ಷಗಳಿಂದೆ ಅಧಿಕಾರ ವಹಿಸಿಕೊಂಡಿದ್ದರು. ಜೊತೆಗೆ ಕಳೆದ ಒಂದು ವರ್ಷದಿಂದ ಜಿಲ್ಲೆಗೆ ಡಿಸಿಯಾಗಿ ಎ ಬಿ ಬಸವರಾಜ್ ಬಂದಿದ್ದರು.
ಡಿಸಿ ಮತ್ತು ಸಿಇಒ ಇಬ್ಬರು ಜಿಲ್ಲೆಯಲ್ಲಿ ಆಕ್ಟೀವ್ ಆಗಿ ಓಡಾಡಿಕೊಂಡು ಕೆಲಸ ಮಾಡುತ್ತಾ ಜನಮನ್ನಣೆ ಗಳಿಸಿದ್ದರು. ಡಿಸಿಯಾಗಿ ಬಂದ ಒಂದು ವರ್ಷಕ್ಕೆ ಬಸವರಾಜ್ ಅವರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಜೊತೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಳೆದ ಎರೆಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಇಒ ಅನುರಾಧ ಅವರನ್ನ ನೇಮಕ ಮಾಡಲಾಗಿದೆ.
ಜಿಲ್ಲಾ ಪಂಚಾಯತಿಯ ಪ್ರಭಾರ ಸಿಇಒ ಆಗಿಯೂ ಅನುರಾಧ ಅವರನ್ನೇ ಮುಂದುವರೆಸಲಾಗಿದೆ. ಅನುರಾಧ ಅವರು ಸಚಿವ ಕೆ.ಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಅವರ ಪತ್ನಿಯಾಗಿದ್ದಾರೆ. ಹೀಗಾಗಿ ಅವರಿಗೆ ಈ ಭಾಗ್ಯ ದೊರೆತಿದೆ ಎಂದು ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಸಚಿವರ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಉನ್ನತ ಹುದ್ದೆಗಳಿಗೆ ನೇಮಕ ಮಾಡ್ತಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬರ್ತಿದ್ದು, ಇದೀಗ ಡಿಸಿ ದಿಢೀರ್ ವರ್ಗಾವಣೆ ಮಾಡಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ.

