ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರ ಬದುಕು ಹಸನಾಗಲಿ ಮತ್ತು ಉತ್ತಮ ಮಳೆ ಬೆಳೆಗಾಗಿ ಪ್ರತಿ ವರ್ಷ ಸೂರ್ಯಯರಘಟ್ಟ ಸ್ವಾಮಿ ದೇವರಿಗೆ ಮತ್ತು ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದಲ್ಲಿ ಶುಕ್ರವಾರ ನಡೆದ ಸೂರ್ಯಯರಘಟ್ಟ ಸ್ವಾಮಿಯ ಎತ್ತಿನ ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನರು ಸೂರ್ಯಯರಘಟ್ಟ ಸ್ವಾಮಿ ದೇವರಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಬುಡಕಟ್ಟು ಸಂಸ್ಕೃತಿಗಳ ತವರೂರು ಎಂದರೆ ನಮ್ಮ ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳಾಗಿದ್ದು ಅತಿ ಹೆಚ್ಚು ಬುಡಕಟ್ಟು ಆಚರಣೆಗಳು ಮುಂದುವರೆಸಿಕೊಂಡು ಬರಲಾಗುತ್ತಿವೆ.
ಬೆಳಘಟ್ಟ ಗ್ರಾಮ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿ ಸುಮಾರು ೬ ರಿಂದ ೭ ಸಾವಿರ ಜನರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಎಲ್ಲಾರೂ ಸಹ ತಮ್ಮ ಕೃಷಿ ಕೆಲಸಗಳನ್ನು ಮುಗಿಸಿಕೊಂಡು ದೀಪವಾಳಿ ನಂತರ ಈ ಜಾತ್ರೆ ಮಾಡಲಾಗುತ್ತಿದೆ.ದೇವರ ಎತ್ತುಗಳಿಗೆ ಪೂಜೆ ಸಲ್ಲಿಸಿದರೆ ಈ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುತ್ತದೆ ಎಂಬುದು ನಂಬಿಕೆಯಾಗಿದೆ ಎಂದರು.
ಇಂದಿನ ಆಧುನಿಕ ಯುಗದಲ್ಲಿಯೂ ಕೂಡ ತಮ್ಮದೇ ಆದ ವಿಶಿಷ್ಟ ಆಚರಣೆಗಳನ್ನು ಮತ್ತು ಪರಂಪರೆಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವೇ ಆಗಿದೆ. ಪಶುಪಾಲಕರೇ ಹೆಚ್ಚಿರುವ ಈ ಸಮುದಾಯದಲ್ಲಿ ಪಶುಗಳಿಗೆ ವಿಶೇಷವಾಗಿ ದೇವರ ಸ್ಥಾನವನ್ನು ನೀಡಲಾಗುತ್ತದೆ. ಆದ್ದರಿಂದಾಗಿ ಯಾವುದೇ ಹಬ್ಬ ಆಚರಣೆಗಳು ನಡೆಯುವಾಗ ದೇವರ ಎತ್ತುಗಳಿಗೆ ವಿಶೇಷ ಮನ್ನಣೆ ಇರುತ್ತದೆ. ದೇವರ ಎತ್ತುಗಳನ್ನು ಪೂಜನೀಯ ಭಾವನೆಯೊಂದಿಗೆ ನೋಡುವ ಸಂಪ್ರದಾಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಬಾಬುರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ ಕಮಲಮ್ಮ, ನಾಗೇಶ್ ಮತ್ತು ಮುಖಂಡರಾದ ಬೋರೇಶ್, ತಿಪ್ಪೇಸ್ವಾಮಿ, ವಿನಾಯಕ, ಜಿ.ಕಾಟಯ್ಯ, ಹಟ್ಟಿ ಯಜಮಾನ ಜಗದೀಶ್, ಕಾಟಯ್ಯ, ದಾಸರ ಪಾಪಯ್ಯ ಇದ್ದರು.

