ಚಾಲುಕ್ಯರ ಕಾಲದ ಶಾಸನ ಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬಾದಾಮಿ ಚಾಲುಕ್ಯರ ಅರಸ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನವು ಕೆರೆಯಲ್ಲಿ ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದಾಪುರ ಕೆರೆಯಲ್ಲಿ ಸ್ಥಳೀಯರು ಜೆಸಿಬಿಯಿಂದ ಮಣ್ಣು ತೆಗೆಯುವ ಸಂದರ್ಭದಲ್ಲಿ ಈ ಶಿಲಾಶಾಸನ ಪತ್ತೆ ಆಗಿದೆ.

ವಿಷಯ ತಿಳಿಯುತ್ತಿದ್ದಂತೆ ಪುರಾತತ್ವ ಇಲಾಖೆ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಶಾಸನಗಳನ್ನು ಪರಿಶೀಲಿಸಿದ ನಂತರ, ಇದು ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಎಂಬುದು ತಿಳಿದು ಬಂದಿದೆ. ಕೆರೆಯಲ್ಲಿ ಪತ್ತೆಯಾದ ಶಾಸನವು 5 ಅಡಿ ಉದ್ದವಿದ್ದು, ಹಳೆಗನ್ನಡದ 17 ಸಾಲುಗಳನ್ನು ಒಳಗೊಂಡಿದೆ. ಇದು ಕ್ರಿ.ಶ. 7ನೇ ಶತಮಾನದ (ಕ್ರಿ.ಶ.654-681) ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಾಸನವಾಗಿದೆ ಎಂದು ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಆರ್.ಶೇಜೇಶ್ವರ ತಿಳಿಸಿದ್ದಾರೆ.

ಏನಿದು ಶಾಸನ?: ಬಾದಾಮಿ ಚಾಲುಕ್ಯರ ಅರಸ ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುವಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದನು. ಆಗ ಪೂರ್ವ ಮರ್ಯಾದೆಯಿಂದ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದು, ಕೆರೆಯನ್ನು ನಿರ್ಮಿಸಿದ ರಾಜರಿಗೆ ಆರು ಭೂಮಿಯನ್ನು ದಾನ ನೀಡಿರುವುದು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತೆದೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಶಾಸನದ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚೀನತೆ ತಿಳಿದು ಬಂದಿದೆ. ಈ ಶಾಸನವು 1,344 ವರ್ಷಗಳ ಪುರಾತನವಾದದ್ದು ಎಂದು ತಿಳಿಯುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ. 17ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ ಎಂದು ಡಾ.ಆರ್.ಶೇಜೇಶ್ವರ ಮಾಹಿತಿ ನೀಡಿದರು.

Share This Article
error: Content is protected !!
";