ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಂಡವರ ಆಸ್ತಿ, ಜಮೀನು ಕಬಳಿಸುವುದರಲ್ಲಿ ಎನ್.ಚಲುವರಾಯಸ್ವಾಮಿ ಎತ್ತಿದ ಕೈ. ಸಚಿವರ ಕಾಟಕ್ಕೆ ಬೇಸತ್ತಿರುವ ರೈತ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದು, ನಮಗೆ ದಯಾ ಮರಣ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಸ್ವಕ್ಷೇತ್ರ ನಾಗಮಂಗಲ ತಾಲೂಕಿನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತವರ ಸಂಬಂಧಿಕರು, ಇಜ್ಜಲಘಟ್ಟ ಗ್ರಾಮದ ಗುಡಾಣಗಲ್ಲು ಬಳಿಯ ಸರ್ವೆ ನಂ.105/7 ಜಮೀನು ವಿಚಾರವಾಗಿ ಕೃಷಿ ಕುಟುಂಬಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ.
ಮಂತ್ರಿಯ ದೌರ್ಜನ್ಯದ ವಿರುದ್ಧ ದೂರು ನೀಡಿದ್ದರೂ, ರಕ್ಷಿಸಬೇಕಾದ ಪೊಲೀಸರು, ಸಚಿವರ ಕೈಗೊಂಬೆಯಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಸಿದ್ದರಾಮಯ್ಯ ಅವರೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸಚಿವರು ಹಾಗೂ ಕಾಂಗ್ರೆಸ್ನಾಯಕರಿಂದ ಅಮಾಯಕರ ಜಮೀನು, ಜಾಗವನ್ನು ಕಬಳಿಸುವ ಕಾನೂನು ಬಾಹಿರ ಕೃತ್ಯಗಳು ಮಿತಿಮೀರಿದೆ. ನಿಮ್ಮ ಸರ್ಕಾರಕ್ಕೆ ಮಾನವೀಯತೆ ಇದ್ದರೆ ಮೊದಲು ನೊಂದಿರುವ ರೈತ ಕುಟುಂಬಗಳಿಗೆ ನ್ಯಾಯ ಕೊಡಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.