ಚಂದ್ರವಳ್ಳಿ ನ್ಯೂಸ್, ಹಿರಿಯೂರು:
‘ಮಕ್ಕಳು ಹೋಂವರ್ಕ್ ಮಾಡಬಾರದು, ಹಾರ್ಡ್ವರ್ಕ್ ಮಾಡಬೇಕು‘ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಿರಿಯೂರು ತಾಲ್ಲೂಕು, ಗೊಲ್ಲಹಳ್ಳಿಯ ಜೆಟ್ ಸಿಬಿಎಸ್ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ಹಳ್ಳಿ ಮಕ್ಕಳು ಪ್ರಾಮಾಣಿಕವಾಗಿ ಪರಿಶ್ರಮಪಟ್ಟರೆ ಯಶಸ್ಸು ಸಾಧಿಸುವುದು ಕಷ್ಟವಲ್ಲ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಥೇನ್ ಸಿಂಗ್ 10ವರ್ಷ ಇರುವಾಗಲೇ ಅವರ ತಾಯಿ ಹಿಮಾಲಯ ಪರ್ವತ ಹತ್ತುತ್ತೀಯಾ ಎಂದು ಕೇಳಿದರು. ಆಗ ಥೇನ್ ಸಿಂಗ್ ಹೌದು ಹತ್ತುತ್ತೇನೆ ಎಂದು ಹೇಳಿದ, ಆದರೆ ಅಂದಿನಿಂದ ಥೇನ್ ಸಿಂಗ್ ಹಿಮಾಲಯ ಪರ್ವತ ಏರುವ ಕನಸನ್ನು ಕಂಡಿದ್ದ, ಜೀವನದಲ್ಲಿ ಅದನ್ನು ಸಾಧಿಸಿ ತೋರಿಸಿದ. ಹೀಗೆ ಮಕ್ಕಳು ತಾವು ಕಾಣುವ ಕನಸ್ಸನ್ನು ಪರಿಶ್ರಮದ ಮೂಲಕ ನನಸು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅತಿ ವೇಗವಾಗಿ ಹೋಗುವ ವಾಹನಕ್ಕೆ ಜೆಟ್ ಎಂದು ಕರೆಯುತ್ತಾರೆ. ನೀವು ಓದುತ್ತಿರುವ ಶಾಲೆಯ ಹೆಸರು ಜೆಟ್ ನಿಮ್ಮ ಬೆಳವಣಿಗೆ ಸಹ ವಿಭಿನ್ನವಾಗಿದೆ ಎಂದು ಹೇಳಿದ ಅವರು ಹಂಸವು ಸರಸ್ವತಿಯ ವಾಹನ, ಅಂತೆಯೇ ನಿಮ್ಮ ಬದುಕಿಗೆ ಜೆಟ್ ಹಂಸವಿದ್ದಂತೆ ಎಂದು ಬಣ್ಣಿಸಿದರು.
ಸಿಬಿಎಸ್ಇ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತಿರುವ ಜೆಟ್ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಮಾಜಿ ಮುಖ್ಯಮಂತ್ರಿಗಳು ತುಂಬು ಹೃದಯದಿಂದ ಶ್ಲಾಘಿಸಿದರು.
ಜೆಟ್ ಶಾಲೆಯಲ್ಲಿ ಇಂದು ನಡೆದ ಮಕ್ಕಳ ಸಂತೆಯಲ್ಲಿ ಸುಮಾರು 1ಲಕ್ಷರೂ ಮೌಲ್ಯದ ಹಣ್ಣುಗಳು, ತರಕಾರಿಗಳು, ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳು, ಕಾಳುಗಳು ಮಾರಾಟವಾದವು. 500ಕ್ಕೂ ಹೆಚ್ಚು ಮಕ್ಕಳು ತಾವು ತಂದ ಪದಾರ್ಥವನ್ನು ಮಾರಾಟ ಮಾಡುವ ಮೂಲಕ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡರು.
ಎರಡು ದಿನದಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯಗಳ ವಸ್ತು ಪ್ರದರ್ಶನ ಹಾಗೂ ಜಾನಪದ ಮತ್ತು ಜ್ಞಾನದ ಆಧಾರದ ಚಟುವಟಿಕೆಗಳು ನಡೆದವು.
ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷರಾದ ಚಂದ್ರಶೇಖರ ಬೆಳಗೆರೆ, ಕಾಯದರ್ಶಿ ಶ್ರೀಮತಿ ಎನ್.ಗಿರಿಜಾ, ಮಾಜಿ ಕಾರ್ಯದರ್ಶಿ ಬಿ.ಎಸ್.ಮಲ್ಲಿಕಾರ್ಜುನ, ಪ್ರಾಂಶುಪಾಲರಾದ ಷಣ್ಮುಗ ಸುಂದರಂ ಹಾಗೂ ಸಮಾಜ ಸೇವಕಿ ಶಶಿಕಲಾ ರವಿಶಂಕರ ಅವರು ಭಾಗವಹಿಸಿದ್ದರು.

