ಚಿತ್ರದುರ್ಗ ವೈದ್ಯಕೀಯ ಕಾಲೇಜ್ ನಿರ್ದೇಶಕನನ್ನು ಕೂಡಲೇ ಅಮಾನತುಗೊಳಿಸಲು ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕರು, ಆಸ್ಪತ್ರೆ ನಿರ್ದೇಶಕರಾದ ಯುವರಾಜ್ ಅಮಾನತಿಗೆ ಕರ್ನಾಟಕ ರಾಜ್ಯ ಮಾದಿಗ ಯುವಸೇನೆಯ ತಾಲ್ಲೂಕು ಶಾಖೆ ಅಧ್ಯಕ್ಷ ಆರ್. ಅಡಿವಪ್ಪ ಒತ್ತಾಯ ಮಾಡಿದ್ದಾರೆ.

ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕರು ಆಸ್ಪತ್ರೆ ನಿರ್ದೇಶಕ ಯುವರಾಜ್ ರವರು ವೈದ್ಯರ ನೇಮಕಾತಿಯಲ್ಲಿ ಲಕ್ಷಾಂತರ ರೂಗಳ  ಅವ್ಯವಹಾರ ಮಾಡಿದ್ದಾರೆ. ನೇಮಕಾತಿ ಸರಿಯಾಗಿ ಮಾಡಿರುವುದಿಲ್ಲ. ಅಲ್ಲದೆ, ಅಭ್ಯರ್ಥಿಗಳಿಂದ ಲಕ್ಷಾಂತರ ರೂ.ಗಳ ಲಂಚ ಪಡೆದು ಅವ್ಯವಹಾರ ನಡೆಸಿದ್ದಾರೆ    ಎಂದು ಕರ್ನಾಟಕ ರಾಜ್ಯ ಮಾದಿಗ ಯುವ ಸೇನೆ ಹಿರಿಯೂರು ತಾಲ್ಲೂಕು ಶಾಖೆ ಅಧ್ಯಕ್ಷ ಆರ್. ಅಡಿವಪ್ಪ ಆರೋಪಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶಿಲ್ದಾರ್ ರವರ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ  ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕರ ಆಸ್ಪತ್ರೆ ನಿರ್ದೇಶಕ ಯುವರಾಜ್ ರವರನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಯಾವುದೇ ಕೆಲಸಕ್ಕೆ ಹಣ ಕೊಟ್ಟವರಿಗೆ ಕೆಲಸ ಮಾಡುವ ಪ್ರವೃತ್ತಿ ಇವರದ್ದು ಮತ್ತು ಬಿಜೆಪಿಯ ಏಜೆಂಟ್ ಆಗಿರುವುದರಿಂದ ಇವರು ಬಿಜೆಪಿಯ ತಾಳಕ್ಕೆ ತಕ್ಕಂತೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಇವರು ಕಡುಭ್ರಷ್ಟನಾಗಿದ್ದು ಇವರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಿ ಲೋಕಾಯುಕ್ತರಿಂದಾಗಲಿ ಅಥವಾ ಸಿಐಡಿ ಯಿಂದಾಗಲೀ ತನಿಖೆ ನಡೆಸಿ ಶಿಕ್ಷೆ ಕೊಡಿಸಬೇಕೆಂದು ಅವರು ಮನವಿ ಮಾಡಿದರು.

ನೇಮಕಾತಿ ಸಂದರ್ಭದಲ್ಲಿ ಯಾರನ್ನು ನೇಮಕ ಮಾಡಿಕೊಳ್ಳಬೇಕು, ಯಾರನ್ನು ನೇಮಕ ಮಾಡಿಕೊಳ್ಳಬಾರದು ಎಂಬ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಭಾರಿ ಅವ್ಯವಹಾರ ನಡೆಸುತ್ತಿದ್ದಾರೆ. ಆದ್ದರಿಂದ ಇವರು ಮಾಡಿರುವ ನೇಮಕಾತಿ ರದ್ದುಪಡಿಸಿ ಹೊಸ ನೇಮಕಾತಿ ಮಾಡಿ ವೈದ್ಯರುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ತನಿಖೆ ಮುಗಿಯುವವರೆಗೂ ಇವರನ್ನು ಅಮಾನತಿನಲ್ಲಿಡಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.

ಸಾರ್ವಜನಿಕವಾಗಿ ಇಂತಹ ಅಧಿಕಾರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದರಿಂದ ಇವರು ಸರ್ಕಾರಿ ಸೇವೆಯಲ್ಲಿ ಮುಂದುವರೆಯಲು ಅನುವು ಮಾಡಿಕೊಡದೆ ಕೂಡಲೇ ಇವರನ್ನು ಅಮಾನತು ಮಾಡಿ, ತನಿಖೆ ಮಾಡಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ, ಶಿವಕುಮಾರ್, ಓಬಳೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

Share This Article
error: Content is protected !!
";