ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇರಳದ ರಾಜಕೀಯ ಇತಿಹಾಸದಲ್ಲಿ ನವಯುಗ ಆರಂಭವಾಗಿದೆ. ಶುಕ್ರವಾರ ತಿರುವನಂತಪುರಂ ನಗರದ ರಸ್ತೆಗಳಲ್ಲಿ ಸಾಗರದಂತೆ ಹರಿದು ಬಂದ ಜನಸ್ತೋಮವೇ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಸಾಕ್ಷಿ ಎಂದು ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಹೇಳಿದರು. ಮೋದಿಜಿಯವರ ‘ವಿಕಸಿತ ಭಾರತ‘ದ ಸಂಕಲ್ಪಗಳು ರಾಷ್ಟ್ರದ ಮೂಲೆ ಮೂಲೆಯನ್ನು ತಲುಪಿವೆ ಎಂಬುದಕ್ಕೆ ಇಂದಿನ ಈ ಅಭೂತಪೂರ್ವ ಸ್ವಾಗತವೇ ಒಂದು ಜ್ವಲಂತ ಉದಾಹರಣೆ.
ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಜನರು ಒಂದಾಗಿ ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದ್ದು, ಇದು ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಬದಲಾಗಿ ವಿಕಸಿತ ಭಾರತದ ನವೀನ ದೃಷ್ಟಿಕೋನ ಎಂಬುವುದನ್ನು ಸ್ಪಷ್ಟವಾಗಿ ಸಾರಿ ಹೇಳಿದೆ.
ಪ್ರಧಾನಿಯವರ ಅಭಿವೃದ್ಧಿ ಹಾಗೂ ರಾಷ್ಟ್ರದ ಭವಿಷ್ಯದ ಮೇಲಿನ ವಿಶ್ವಾಸಕ್ಕೆ ಕೇರಳದ ಜನತೆ ಇಂದು ವಿಶೇಷವಾಗಿ ಸ್ಪಂದಿಸಿದ್ದಾರೆ. ಈ ದೃಶ್ಯಗಳು ಭಾರತ ಪ್ರಗತಿಯ ಪಥದಲ್ಲಿ ‘ಜನಶಕ್ತಿ‘ಯ ಮಹತ್ವವನ್ನು ಜಗತ್ತಿಗೆ ಸಾರುವ ಶಕ್ತಿಶಾಲಿ ಸಂದೇಶವಾಗಿವೆ” ಎಂದು ರವಿ ಅವರು ತಿಳಿಸಿದರು.

