ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ತೂಬಗೆರೆ ಹೋಬಳಿಯ ಬೆನಕನ ಹಳ್ಳ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ಧ ಬೆನಕಪ್ಪ ದೇವಾಲಯದ ಸ್ವಚ್ಛತಾ ಕಾರ್ಯವನ್ನು ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಛತಾ ಸಮಿತಿ ವತಿಯಿಂದ ಮಾಡಲಾಯಿತು.
ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಯಂ ಸೇವಕ ಶಶಿಧರ್ ಮಾತನಾಡಿ ಸಮಾನ ಮನಸ್ಕರು ಒಂದೆಡೆ ಸೇರಿ ಹಿಂದೂ ದೇವಾಲಯಗಳ ಅಭಿವೃದ್ಧಿ ಹಾಗೂ ಉಳಿವಿಗಾಗಿ ಸ್ವಚ್ಛತೆ ಮಾಡಲು ಮುಂದಾಗಿದ್ದು ಸ್ಥಳೀಯ ಗ್ರಾಮಸ್ಥರಿಂದ ಉತ್ತಮ ಬೆಂಬಲ ದೊರೆತಿದೆ. ಸುಮಾರು 300ಕ್ಕೂ ವರ್ಷಗಳ ಇತಿಹಾಸವಿರುವ ಬೆನಕಪ್ಪ ದೇವಾಲಯವನ್ನು ಇಂದು ಸ್ವಚ್ಛಗೊಳಿಸಿದ್ದೇವೆ . ಇಲ್ಲಿಗೆ ಬರುವ ಪ್ರವಾಸಿಗರು ದೇವಾಲಯವನ್ನು ಮೋಜು ಮಸ್ತಿಗಳ ಅಡ್ಡ ಮಾಡಿಕೊಂಡಿದ್ದಾರೆ ಈ ವರ್ತನೆ ಬದಲಾಗಬೇಕಿದೆ ಭಕ್ತಿ ಭಾವದಿಂದ ದೇವಾಲಯಕ್ಕೆ ಬಂದು ದೇವಾಲಯದ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂದರು.
ದೇವಾಲಯಗಳ ಸ್ವಚ್ಛತಾ ಸಮಿತಿಯ ಪ್ರಮುಖರಾದ ಕೆಂಪೇಗೌಡ ದೇವಾಲಯಗಳ ಸ್ವಚ್ಛತಾ ಕಾರ್ಯಕ್ಕೆ ಯುವಕರು ತಾವಾಗಿಯೇ ಸ್ವಇಚ್ಛೆಯಿಂದ ಮುಂದೆ ಬರುತ್ತಿದ್ದು. ಸ್ಥಳೀಯ ಗ್ರಾಮಸ್ಥರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಿಂದೂ ದೇವಾಲಯಗಳನ್ನು ಉಳಿಸುವುದು ನಮ್ಮೆಲ್ಲರ ಉದ್ದೇಶ ನಮ್ಮೊಂದಿಗೆ ಕೈಜೋಡಿಸಲು, ಶ್ರಮದಾನ ಕಾರ್ಯದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು .
ಸ್ಥಳೀಯರಾದ ಉದಯ್ ಆರಾಧ್ಯ ಮಾತನಾಡಿ ಈ ದೇವಾಲಯದಲ್ಲಿ ಗಣೇಶ ಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು , ಶ್ರೀಕಂಟೇಶ್ವರ ಪಾರ್ವತಿ ದೇವಿ ಹಾಗೂ ಸುಬ್ರಮಣ್ಯೇಶ್ವರ ಸ್ವಯಂ ಭೂ ಆಗಿ ನೆಲೆಸಿದ್ದಾರೆ . ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯದ ಆವರಣದಲ್ಲಿ ಉತ್ತರ ಪಿನಾಕಿನಿ ನದಿಯು ಹರಿಯುತ್ತದೆ. ಪ್ರಾಕೃತಿಕ ಸೌಂದರ್ಯ ನಡುವೆ ದೈವಿಕ ಅನುಭವ ಅದ್ಭುತವಾಗಿದೆ . ದೇವಾಲಯಕ್ಕೆ ಜೀರ್ಣೋದ್ಧಾರದ ಅವಶ್ಯಕತೆ ಇದ್ದು ಇಂದು ದೇವಾಲಯದ ಸ್ವಚ್ಛತೆ ಕಾರ್ಯದಲ್ಲಿ ಶ್ರಮದಾನ ಮಾಡಿರುವ ಎಲ್ಲರಿಗೂ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅನಂತ ರಾಜ ಗೋಪಾಲ್ , ಗೋಪಾಲ್, ಕೃಷ್ಣಪ್ಪ (ಸಿ ಎಂ ), ಮುನಿಕೃಷ್ಣಚಾರಿ, ಕಿರಣ್, ಕೆಂಪ ರಾಜು, ಶಿವಕುಮಾರ, ಶ್ಯಾಮ್, ಶಿವಕುಮಾರ್ ಸ್ವಾಮಿ, ರಾಜೇಶ್, ಉದಯ ಆರಾಧ್ಯ, ಹಳ್ಳಿ ರೈತ ಅಂಬರೀಷ್, ಶ್ರೀಧರ್, ಆರ್ ಟಿ ಸುನಿಲ್, ಅರುಣ ಸೇರಿದಂತೆ ಹಲವರು ಹಾಜರಿದ್ದರು.

