ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇರಳಕ್ಕೆ ಮತ್ತು ವಯನಾಡಿಗೆ ಸಂಕಷ್ಟ ಎದುರಾದಾಗ ಮರಗುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕನ್ನಡಿಗರ ಸಂಕಷ್ಟಕ್ಕೆ ಕಿವಿಗೊಡದಿರುವುದು ದುರಂತ ಎಂದು ಜೆಡಿಎಸ್ ಆರೋಪಿಸಿದೆ.
ಕಳೆದ ವರ್ಷ ಸಂಭವಿಸಿದ್ದ ವಯನಾಡಿನ ಭೂಕುಸಿತಕ್ಕೆ ವಿಶೇಷ ಆಸಕ್ತಿವಹಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರ 20 ಕೋಟಿ ರೂ. ಅನುದಾನ ಒದಗಿಸಿದೆ.
ಹಿಂದೆ ಆನೆಯ ಕಾಲ್ತುಳಿಕ್ಕೆ ಮೃತನಾದ ಕೇರಳದ ವ್ಯಕ್ತಿಗೆ 15 ಲಕ್ಷ ಪರಿಹಾರ ನೀಡಲಾಗಿತ್ತು. ಪ್ರಿಯಾಂಕಾ ಗಾಂಧಿ ವಯನಾಡಿನ ಸಂಸದೆಯಾಗಿರುವ ಕಾರಣಕ್ಕೆ ಕನ್ನಡಿಗರ ತೆರಿಗೆ ಹಣವನ್ನು ಸಿದ್ದರಾಮಯ್ಯ, ಡಿಕೆಶಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ರಾಜ್ಯದ ಸರ್ಕಾರಿ ನೌಕರರಿಗೆ 3 ತಿಂಗಳ ವೇತನ ಕೊಟ್ಟಿಲ್ಲ. 834.89 ಕೋಟಿ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದು ಕಡೆ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಹಿಂಬಾಕಿ ನೀಡಲು ಖಜಾನೆಯಲ್ಲಿ ದುಡ್ಡಿಲ್ಲ ಎಂದು ಸತಾಯಿಸುತ್ತಿದೆ.
ರಾಜ್ಯದಲ್ಲಿ ರೈತರು ರಸಗೊಬ್ಬರವಿಲ್ಲದೇ ಪರದಾಡುತ್ತಿದ್ದರೆ, ಕೇರಳಕ್ಕೆ ಯೂರಿಯಾ ಗೊಬ್ಬರಗಳನ್ನು ಕಳ್ಳಸಾಗಣೆ ಮಾಡುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಮಾರಿ, ಕೇರಳಕ್ಕೆ ಉಪಕಾರಿಯಾಗಿದೆ ಎನ್ನವಂತಾಗಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.

