ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಸಿಎಂ-ಡಿಸಿಎಂ ಮಧ್ಯ ಸಾಕಷ್ಟು ಬಿರುಕು ಕಾಣಿಸಿಕೊಂಡಿರುವುದು ಬಹಿರಂಗವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಇಲಾಖೆಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುವ ಮೂಲಕ ಇಬ್ಬರ ಜಗಳ ಬೀದಿಗೆ ಬಂದಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿನ ಇಂಜಿನಿಯರ್ ಮತ್ತು ಕೆಲ ಅಧಿಕಾರಿಗಳನ್ನು ಮುಖ್ಯಮಂತ್ರಿಗಳ ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡಿರುವುದಕ್ಕೆ ಸಿಟ್ಟಾಗಿದ್ದ ಡಿಕೆ ಶಿವಕುಮಾರ್ ಅವರು ಕಳೆದ ಮೇ 13 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಡಿಕೆಶಿ ಬರೆದಿರುವ ಪತ್ರದಲ್ಲಿ ಐವರು ಎಂಜಿನಿಯರ್ಗಳ ವರ್ಗಾವಣೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇರ ಅಧೀನದಲ್ಲಿ ಡಿಪಿಎಆರ್ ಕಾರ್ಯನಿರ್ವಹಿಸುತ್ತಿದೆ. ಮುಖ್ಯ ಎಂಜಿನಿಯರ್ಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿಗೆ ಡಿಪಿಎಆರ್ ಕಳುಹಿಸಿತ್ತು. ಮುಖ್ಯಮಂತ್ರಿ ಅನುಮೋದನೆ ನೀಡಿದ ಬಳಿಕ ಐವರು ಮುಖ್ಯ ಎಂಜಿನಿಯರ್ಗಳನ್ನು ಮೇ 9ರಂದು ವರ್ಗಾವಣೆ ಮಾಡಿ ಆದೇಶ ಮಾಡಲಾಗಿತ್ತು.
ನನ್ನ ಇಲಾಖೆಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳ ಬಗ್ಗೆ ಆದೇಶ ಹೊರಡಿಸುವ ಮೊದಲು ನನ್ನ ಪೂರ್ವಾನುಮತಿ ಪಡೆಯಲೇಬೇಕು ಎಂದು ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿಯ ಮೂಲಕ ಮುಖ್ಯ ಕಾರ್ಯದರ್ಶಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದರು. ಆ ಸೂಚನೆಯನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಿರುವುದು ಶಿವಕುಮಾರ್ ಅವರನ್ನು ಕೆರಳಿಸಿದೆ ಎನ್ನಲಾಗಿದೆ.
ಹಲವು ತಿಂಗಳುಗಳಿಂದ ಹುದ್ದೆ ನಿರೀಕ್ಷೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯಕ್ಕೆ ಸೇರಿದ ಐವರು ಮುಖ್ಯ ಎಂಜಿನಿಯರ್ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಖಾಲಿ ಇದ್ದ ಹುದ್ದೆಗಳಿಗೆ ವರ್ಗಾವಣೆ ಮಾಡಿ ಮೇ 9ರಂದು ಡಿಪಿಎಆರ್ ಅಧಿಸೂಚನೆ ಹೊರಡಿಸಲಾಗಿತ್ತು. ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು, ಪ್ರಭಾರ ವರ್ಗಾವಣೆ ಪ್ರಮಾಣ ಪತ್ರವನ್ನು (ಸಿಟಿಸಿ) ಸಲ್ಲಿಸಬೇಕು ಎಂದೂ ಡಿಪಿಎಆರ್ ನಿರ್ದೇಶನ ನೀಡಿತ್ತು. ಅದರ ಅನ್ವಯ ಎಲ್ಲ ಐವರು ಎಂಜಿನಿಯರ್ಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರಿಂದಾಗಿ ಸಿಎಂ-ಡಿಸಿಎಂ ಮಧ್ಯ ಈಗ ವಿವಾದ ಉಂಟಾಗಿದೆ.
ಅಂತರ ರಾಜ್ಯ ಜಲವಿವಾದ, ನೀರಾವರಿ ಯೋಜನೆಗಳ ವಲಯ, ಎತ್ತಿನಹೊಳೆ ಯೋಜನಾ ವಲಯ, ಕಾಡಾ ನೀರಾವರಿ ಯೋಜನೆಗಳ ವಲಯ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಈ ಐವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿತ್ತು.
ಎಚ್.ಸಿ.ರಮೇಂದ್ರ, ಅಂತರರಾಜ್ಯ ಜಲ ವಿವಾದ, ಬೆಂಗಳೂರು, ವಿನಾಯಕ ಜಿ.ಸುಗೂರ, ನೀರಾವರಿ ಯೋಜನೆಗಳ ವಲಯ, ಕರ್ನಾಟಕ ನೀರಾವರಿ ನಿಗಮ, ತುಮಕೂರು, ಜೆ.ಇ. ಯತೀಶ್ ಚಂದ್ರನ್, ಎತ್ತಿನಹೊಳೆ ಯೋಜನಾ ವಲಯ, ಕರ್ನಾಟಕ ನೀರಾವರಿ ನಿಗಮ, ತುಮಕೂರು. ಶಿವಾನಂದ ಆರ್.ನಾಯಕ್, ಆಡಳಿತಾಧಿಕಾರಿ, ಕಾಡಾ ನೀರಾವರಿ ಯೋಜನೆಗಳ ವಲಯ, ಕಲಬುರಗಿ. ಪಿ.ಬಿ.ಪ್ರಕಾಶ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಬೆಂಗಳೂರು. ಇಲ್ಲಿಗೆ ಇವರುಗಳನ್ನು ವರ್ಗಾವಣೆ ಮಾಡಲಾಗಿತ್ತು ಎನ್ನುವುದು ವಿಶೇಷ.
ತನ್ನ ಅಧೀನದ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯಸ್ಥರ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಸಂದರ್ಭದಲ್ಲಿ ಗಮನಕ್ಕೆ ತಾರದ ಡಿಪಿಎಆರ್ನ ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ಇಲಾಖೆಯಿಂದ ಬಡ್ತಿ, ಮುಂಬಡ್ತಿ ಪಡೆದುಕೊಂಡು ಬೇರೆ ಇಲಾಖೆಗಳಿಗೆ ಹೋಗುತ್ತಾರೆ. ನಮ್ಮಇಲಾಖೆಯಲ್ಲಿ ಇಂಜಿನಿಯರ್ ಗಳ ಕೊರತೆಯಿದೆ ಹೀಗಾಗಿ ಅವರುಗಳನ್ನು ರಿಲೀವ್ ಮಾಡದಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.