ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್-6ರಂದು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿದ್ದು ಈ ಕುತೂಹಲದ ಬಜೆಟ್ ಮಂಡನೆಗಾಗಿ ರಾಜ್ಯದ ಜನತೆ ಕಾಯುತ್ತಿದ್ದಾರೆ. ಈ ಬಾರಿಯ ಬಜೆಟ್ 4.09 ಲಕ್ಷ ಕೋಟಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಜನತೆ ಚಾತಕಪಕ್ಷಿಗಳಂತೆ ಕಾಯುತ್ತಿರುವ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದು ರೈತಪರ ಸಂಘಟನೆಗಳು ಅನುದಾನಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಿವೆ. ಸಾಲದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳನ್ನು ಭೇಟಿ ಮಾಡಿ ಯೋಜನೆಗೆ ಕನಿಷ್ಠ 5 ಸಾವಿರ ಕೋಟಿ ರೂ. ಮೀಸಲಿಡುವಂತೆ ಮನವಿ ಸಲ್ಲಿಸಿದ್ದಾರೆ.
ಇದರ ಜೊತೆಯಲ್ಲಿ ವಿವಿಧ ತಾಲೂಕುಗಳ ಕೆರೆ ಕಟ್ಟೆಗಳಿಗೆ ಭದ್ರಾ ಯೋಜನೆಯಿಂದ ನೀರು ಭರ್ತಿ ಮಾಡುವಂತೆ ರೈತಾಪಿ ವರ್ಗವು ಜನಪ್ರತಿನಿಧಿಗಳನ್ನ ಆಗ್ರಹ ಮಾಡುತ್ತಿದೆ. ಈ ಎಲ್ಲ ನಿರೀಕ್ಷೆಗಳಿಗೆ ನ್ಯಾಯ ನೀಡಬೇಕಾದರೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕಾಗುತ್ತದೆ.
ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲು ಮಾರ್ಗಕ್ಕಾಗಿ ಭೂ ಸ್ವಾಧೀನ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಭೂ ಸ್ವಾಧೀನ ಕಾರ್ಯಕ್ಕೆ ವೇಗ ನೀಡಬೇಕಾಗಿದೆ. ಅಲ್ಲದೆ ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲು ಮಾರ್ಗ ಯೋಜನೆ 2028ರ ಫೆಬ್ರವರಿಯೊಳಗೆ ಪೂರ್ಣಗೊಳಿಸಿದರೆ ಈ ಯೋಜನೆಯು ಬಯಲುಸೀಮೆ ಭಾಗದ ಜನರಿಗೆ ಅನುಕೂಲವಾಗಲಿದೆ.
ಯೋಜನೆಯ ವಿವರಗಳು:
ತುಮಕೂರು –ಚಿತ್ರದುರ್ಗ-ದಾವಣಗೆರೆ ನಡುವಿನ ಸುಮಾರು 190ಕ್ಕೂ ಹೆಚ್ಚು ಕಿ.ಮೀ. ನೇರ ರೈಲ್ವೆ ಯೋಜನೆ ಇದಾಗಿದೆ.
16 ಹೊಸ ನಿಲ್ದಾಣಗಳು: ಉರಕೆರೆ, ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ, ಆನೆಸಿದ್ರಿ, ಹಿರಿಯೂರು, ಮೇಟಿ ಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವನಹಳ್ಳಿ, ಸಿರಿಗೆರೆ ಕ್ರಾಸ್, ಭರಮಸಾಗರ, ಹೆಬ್ಬಾಳು, ಆನಗೋಡು ಗ್ರಾಮಗಳಲ್ಲಿ ನಿಲ್ದಾಣ ಆಗಲಿದೆ.
ಪ್ರಯಾಣದ ಸಮಯ:
ಈ ಯೋಜನೆಯು ರಾಜ್ಯದ ಒಳನಾಡು ಪ್ರದೇಶಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು 2.5 ರಿಂದ 3.5 ಗಂಟೆಗಳೊಳಗೆ ಬೆಂಗಳೂರು ತಲುಪಬಹುದಾಗಿದೆ.
ಸಿದ್ದರಾಮಯ್ಯನವರು ಮಂಡಿಸಲಿರುವ ಪ್ರಸಕ್ತ ಬಜೆಟ್ ನಲ್ಲಿ ಕೈಗಾರಿಕೆ ಮತ್ತು ಮಹಿಳಾ ಸಬಲಿಕರಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಾಧ್ಯತೆಯಿದೆ. ಕೃಷಿ, ಆರೋಗ್ಯ, ಕೈಗಾರಿಕೆ, ರಸ್ತೆ, ನೀರಾವರಿ ಹೀಗೆ ಹಲವು ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡುವ ಮೂಲಕ ಉತ್ತಮ ಬಜೆಟ್ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈ ಸಾಲಿನ ಬಜೆಟ್ನಲ್ಲಿ ವಿವಿಧ ಯೋಜನೆಗಳು ಘೋಷಣೆಯಾಗುವುದನ್ನು ಇಲ್ಲಿನ ಜನ ಎದುರು ನೋಡುತ್ತಿದ್ದಾರೆ.
ಜಿಲ್ಲೆಯ ಹಲವು ಬೇಡಿಕೆಗಳು ಹಾಗೆಯೇ ಉಳಿದಿವೆ. 1500 ಎಕರೆಯಲ್ಲಿ ತಲೆ ಎತ್ತುತ್ತಿರುವ ಮೇಟಿಕುರ್ಕೆ ಕೈಗಾರಿಕಾ ವಲಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಬೃಹತ್ ಕೈಗಾರಿಕೆಗಳನ್ನು ತರುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದ್ದು ಇದಕ್ಕಾಗಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದ್ದು ಈ ಬಾರಿಯ ಬಜೆಟ್ನಲ್ಲಿ ಅವುಗಳಿಗೆ ಜೀವಸಿಗಬಹುದು ಎಂದು ಜಿಲ್ಲೆಯ ಜನರು ಕಾತರದಿಂದ ಎದುರು ನೋಡುತ್ತಿದ್ದಾರೆ.
ಈ ಭಾಗದಲ್ಲಿ ಕೈಗಾರಿಕಾ ವಲಯ(ಹಬ್) ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಿದರೆ ನಿರುದ್ಯೋಗ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.
ಜಿಲ್ಲಾಧಿಕಾರಿಗಳ ಕಚೇರಿ ಗೊಂದಲ:
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಕಾರ್ಯ ಗೊಂದಲ ಉಲ್ಬಣಕ್ಕೆ ಹೋಗಿದೆ. ಸಾರ್ವಜನಿಕರ ವಿರೋಧದ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಡಳಿತ ರೂಢ ಶಾಸಕರು ಮನಸ್ಸೋ ಇಚ್ಚೆ ತೀರ್ಮಾನ ಮಾಡುತ್ತಿದ್ದಾರೆ.
ಚಿತ್ರದುರ್ಗ ನಗರದಿಂದ ಕೇವಲ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ 48 ಕೋಟಿ ರೂ.ವೆಚ್ಚ ಮಾಡಿ ಪ್ರಸ್ತುತ ಕುಂಚಿಗನಾಳು ಹತ್ತಿರ ನಿರ್ಮಾಣವಾಗಿರುವ ಜಿಲ್ಲಾಧಿಕಾರಿಗಳ ಕಚೇರಿ ನಗರದಿಂದ ದೂರವಾಗಿದೆ ಎನ್ನುವ ಕುಂಟು ನೆಪದ ಕಾರಣ ನೀಡಿ ತೋಟಗಾರಿಕೆ ಇಲಾಖೆಯ ಜಾಗದಲ್ಲೇ ಡಿಸಿ ಕಚೇರಿ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗಿದೆ. ಇದು ಪರಿಸರ ಪ್ರೇಮಿಗಳು, ರೈತರು, ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ.
ಅಲ್ಲದೆ ದಾವಣಗೆರೆ, ಹಾವೇರಿ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ 5 ರಿಂದ 10 ಕಿಲೋ ಮೀಟರ್ ದೂರದಲ್ಲಿ ಕಟ್ಟಿರುವುದರಿಂದ ಆ ಭಾಗಗಳೆಲ್ಲವೂ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೆ ಮೂರು ಕಿಲೋ ಮೀಟರ್ ದೂರದಲ್ಲಿರುವ ಚಿತ್ರದುರ್ಗ ಡಿಸಿ ಕಚೇರಿಗೆ ಏಕೆ ಇಷ್ಟು ವಿರೋಧ ಎನ್ನುವುದನ್ನ ಜನಪ್ರತಿನಿಧಿಗಳೆ ಹೇಳಬೇಕಾಗಿದೆ.
ಚಿತ್ರದುರ್ಗ ನಗರದೊಳಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎನ್ನುವ ತೀರ್ಮಾನವನ್ನು ಸಾರ್ವಜನಿಕರು ಕೈಗೊಂಡಿದ್ದಾರೆ.
ಕೊಡಲಿ ಪೆಟ್ಟು: ತೋಟಗಾರಿಕೆ ಇಲಾಖೆಯ 6.10 ಎಕರೆ ಮತ್ತು ಹಾಪ್ಕಾಮ್ಸ್ ವ್ಯಾಪ್ತಿಯ 0.20 ಎಕರೆ ಸೇರಿ ಒಟ್ಟು 6.30 ಎಕರೆ ಜಮೀನನ್ನು ಡಿಸಿ ಕಚೇರಿಗೆ ಮೀಸಲಿಡುವ ಅವೈಜ್ಞಾನಿಕವಾದ ತೀರ್ಮಾನ ಮಾಡಿರುವುದು ಅತ್ಯಂತ ಖಂಡನೀಯ. ಈ ಆವರಣದಲ್ಲಿ 2156 ಗಿಡ ಮರಗಳು, ಐದಾರು ಕೋಟ್ಯಂತರ ರೂ.ಗಳ ಕಟ್ಟಡಗಳಿಗೂ ಕೊಡಲಿ ಪೆಟ್ಟು ಬೀಳಲಿದೆ.
ಚಿತ್ರದುರ್ಗ ಮೆಡಿಕಲ್ ಕಾಲೇಜ್:
ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಮುಖ ಕೇಂದ್ರವಾಗಿದೆ. ಈ ಸಂಸ್ಥೆಯ ವಿವಿಧ ವಿಭಾಗಗಳಿಗೆ ಸ್ನಾತಕೋತ್ತರ ಪದವಿಗಳನ್ನು ತೆರೆಯಬೇಕಿದೆ. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ಮೆಡಿಕಲ್ ಕಾಲೇಜ್ ಗೆ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ಒದಗಿಸಲು ಹೆಚ್ಚಿನ ಅನುದಾನ ಅಗತ್ಯವಾಗಿದ್ದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಮೀಸಲಿಡಲಿದ್ದಾರೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಇದರ ಜೊತೆಯಲ್ಲಿ ಶೇಂಗಾ, ಮೆಕ್ಕೆಜೋಳ, ತೊಗರೆ, ದಾಳಿಂಬೆ, ತೆಂಗು, ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕಿದ್ದು ಸಿಎಂ ಏನು ತೀರ್ಮಾನ ಮಾಡಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.

