ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಹದಗೆಟ್ಟ ಕಾನೂನು ಸುವ್ಯವಸ್ಥೆಯ ನಿರಂತರ ವೈಫಲ್ಯ, ಇವೆಲ್ಲವನ್ನೂ ಮುಚ್ಚಿಕೊಳ್ಳಲು ಆಯೋಗಗಳನ್ನು ರಚಿಸುವುದು, ಪ್ರಾಮಾಣಿಕ ಅಧಿಕಾರಿಗಳ ಬಲಿ ತೆಗೆದುಕೊಳ್ಳುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನರ ದಿಕ್ಕು ತಪ್ಪಿಸುವ ಕುತಂತ್ರ ನಡವಳಿಕೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತರಾಟೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ RCB ವಿಜಯೋತ್ಸವದ ಸಂಭ್ರಮಾಚರಣೆಯನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟು ದೂರದೃಷ್ಟಿ ಹಾಗೂ ಜನಕಾಳಜಿ ಇಲ್ಲದ ಅವಿವೇಕಿ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ತಲೆದಂಡ ತಪ್ಪಿಸಿಕೊಳ್ಳಲು ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ್ದ ಈ ಸರ್ಕಾರ ಇದೀಗ ಅವರ ಅಮಾನತ್ತನ್ನು ರದ್ದುಗೊಳಿಸಿ ಮುಖ ಮುಚ್ಚಿಕೊಳ್ಳಲು ಹೊರಟಿದೆ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸರ್ಕಾರದ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ‘ತುಘಲಕ್‘ ನಿರ್ಧಾರದಿಂದ ಇಂಥಾ ಘೋರ ದುರಂತ ಸಂಭವಿಸಿತು ಎಂಬ ವಾಸ್ತವ ಸತ್ಯದ ಹಿನ್ನಲೆಯಲ್ಲಿ ಜನಾಕ್ರೋಶ ಎದುರಿಸಲಾಗದೆ ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು’ ಭಂಡತನದಿಂದ ಅಧಿಕಾರದಲ್ಲಿ ಉಳಿಯಲು ತಪ್ಪೆಸಗದ ಪೊಲೀಸ್ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿ ಹೊಣೆಗೇಡಿತನದಿಂದ ಪಾರಾಗಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಪ್ರಯತ್ನಿಸಿದ್ದರು.
ಇದೀಗ ಗತ್ಯಂತರವಿಲ್ಲದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅಧಿಕಾರಿಗಳ ಅಮಾನತು ರದ್ದುಗೊಳಿಸಲಾಗಿದೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಇತರರು ಅಮಾನತು ರದ್ದುಗೊಂಡ ಅಧಿಕಾರಿಗಳ ಕ್ಷಮೆಯಾಚಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

