ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿಕೆ ಸಂಬಂಧ ಉಂಟಾಗಿರುವ ಮನಸ್ತಾಪವನ್ನು ಶಮನ ಮಾಡಲು ಅಲ್ಪಸಂಖ್ಯಾತರ ಜೊತೆ ಮಾತನಾಡಿ ಮನವೊಲಿಸಿ ಸಮಾಧಾನ ಮಾಡ್ತೇವೆ, ಅವರಿಗೆ ಬೇರೆ ಅವಕಾಶ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದ ಅವರು, ಅಲ್ಪಸಂಖ್ಯಾತರಲ್ಲಿನ ಅಸಮಾಧಾನ ಹೋಗಲಾಡಿಸಲು ಪ್ರಯತ್ನ ಮಾಡುತ್ತೇವೆ. ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ 100% ಗೆಲ್ಲುವ ವಿಶ್ವಾಸ ಇದೆ. ಬಿಜೆಪಿಯವರು ಇದೇ ರೀತಿ ಹೇಳಿದ್ದರು. ಬಸವರಾಜ್ ಬೊಮ್ಮಾಯಿ, ಕುಮಾರಸ್ವಾಮಿ ಪುತ್ರ ಗೆಲ್ತಾರೆ ಅಂತ ಹೇಳಿದ್ದರು, ಸೋತ್ರು. ನುಡಿದಂತೆ ನಡೆದಿದ್ದೇವೆ, ಗ್ಯಾರಂಟಿ ಕೊಟ್ಟಿದ್ದೇವೆ. ಬೈ ಎಲೆಕ್ಷನ್ ಗೆದ್ದು ಸಾಬೀತು ಮಾಡಿದ್ದೇವೆ ಎಂದು ಹೇಳಿದರು.
ಉಪಚುನಾವಣೆಲ್ಲಿ ಬಿಜೆಪಿ ಗೆಲ್ಲೋದಿಲ್ಲ, ದಿಕ್ಸೂಚಿ ಹೇಗೆ ಆಗುತ್ತದೆ?. ಬಡವರು, ಅಲ್ಪಸಂಖ್ಯಾತರು, ರಾಜ್ಯದ ಜನ ನಮ್ಮ ಪರವಾಗಿ ಇದ್ದಾರೆ. ನಾವು ಅಧಿಕಾರದಲ್ಲಿ ಇದ್ದೇವೆ, ಸಂಪೂರ್ಣ ಗೆಲ್ಲುವ ವಿಶ್ವಾಸ ಇದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕಡೇ ಸೋಲುತ್ತದೆ ಎಂದರು.
ಮುಸ್ಲಿಮರ ಆಕ್ರೋಶ:
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ಸಮರ್ಥ್ ಶಾಮನೂರು ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿದ್ದು, ಅಲ್ಪಸಂಖ್ಯಾತ ಮುಸ್ಲಿಮರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಭಾನುವಾರ ದಾವಣಗೆರೆ ನಗರದ ಅಕ್ತರ್ ರಜಾ ಸರ್ಕಲ್ನಲ್ಲಿ ಸೇರಿ, ಕಪ್ಪು ಬಾವುಟ ಹಾಗೂ ಪ್ರತಿಭಟನಾ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದರು.
ಕಾಂಗ್ರೆಸ್ ಸರ್ಕಾರ ನಮ್ಮನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ಉಪಯೋಗಿಸುತ್ತಿದೆ. ನಮ್ಮ ದಶಕಗಳ ಕಾಲದ ಬೇಡಿಕೆ ಈಡೇರಿಸದೇ ನಿರ್ಲಕ್ಷ್ಯ ತೋರಿದೆ ಎಂದು ಅಸಮಾಧಾನ ಹೊರಹಾಕಿದ್ದರು.
ಪ್ರತಿಭಟನಾಕಾರರು ಇದೇ ವೇಳೆ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ದ ಧಿಕ್ಕಾರ ಕೂಗಿದರು. ಎಲ್ಲಾ ಟಿಕೆಟ್ ಶಾಮನೂರು ಕುಟುಂಬಕ್ಕೆ ಕೊಡಿ. ನಾವು ಕೇವಲ ಮತ ನೀಡಲು ಮಾತ್ರ ಇರುತ್ತೇವೆ. ಬಿಜೆಪಿಯಿಂದ ತೊಂದರೆ ಎಂದು ಭಯ ಉಂಟು ಮಾಡಿ ನಮ್ಮನ್ನು ಬಳಸಿಕೊಂಡಿರಿ. ಮೋದಿ ಪ್ರಧಾನಿಯಾಗಿ 12 ವರ್ಷ ಆಯಿತು. ನಮಗೆ ಏನೂ ತೊಂದರೆ ಆಗಿಲ್ಲ. ಈ ಸಲ ನಾವು ಬಿಜೆಪಿ ಸೇರಿದಂತೆ ಬೇರೆ ಪಕ್ಷಗಳಿಗೆ ಹಾಗು ನೋಟಾಗೆ ಮತ ನೀಡುತ್ತೇವೆ. ದಾವಣಗೆರೆ ಸೇರಿದಂತೆ ಬಾಗಲಕೋಟೆಯಲ್ಲೂ ಕಾಂಗ್ರೆಸ್ ಪಕ್ಷ ಸೋಲಿಸುತ್ತೇವೆ ಎಂದು ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದ್ದರು.
ಮುಸ್ಲಿಂ ಮುಖಂಡ ಸೈಯ್ಯದ್ ರಿಯಾಜ್ ಮಾತನಾಡಿ, ಮುಸ್ಲಿಂರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಪ್ರತೀ ಬಾರಿ ಸಮಾಧಾನಕರ ಬಹುಮಾನ ಕೊಡ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಕೊಡಲು ಸಿದ್ಧರಾಗಿದ್ದೇವೆ. ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಹಲವು ವರ್ಷಗಳಿಂದ ದುಡಿದಿದ್ದೇವೆ. ನಮಗೆ ನ್ಯಾಯ ಸಿಕ್ಕಿಲ್ಲ. ಅದಕ್ಕೆ ಬಂಡಾಯ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿಕೊಳ್ಳುತ್ತೇವೆ. ಸುರ್ಜೆವಾಲಾ ಹಾಗು ಡಿಕೆಶಿ ಸಭೆ ಕರೆದಾಗ ನಿಮಗೆ ನ್ಯಾಯ ಕೊಡುತ್ತೇವೆ ಎಂದಿದ್ದರು. ಇವರು ನಮಗೆ ಮೋಸ ಮಾಡಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅವರು ಕಿಡಿಕಾರಿದ್ದನ್ನ ಸ್ಮರಿಸಬಹುದಾಗಿದೆ.

