ನಮ್ಮ ಕಾಲದ ಶಾಲಾ ದಿನಗಳೇ ಮತ್ತೆ ಬನ್ನಿ!?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಾವು ಶಾಲೆಗೆ ಹೋಗುವ ದಿನಗಳಲ್ಲಿ ಶಾಲೆಯ ಎಲ್ಲಾ ಕೆಲಸಗಳನ್ನು ನಾವೇ ಮಾಡಬೇಕಾಗಿತ್ತು. ಶಾಲೆಯ ಆವರಣದ ಕೈತೋಟದಲ್ಲಿ ನಾವುಗಳೇ ಗುಂಡಿ ತೆಗೆದು
, ಗಿಡ ನೆಟ್ಟು, ಪಾತಿ ಮಾಡಿ, ನೀರು ಹಾಕಿ, ಅದನ್ನ ಪೋಷಿಸುವುದು.

ಪ್ರತಿ ಶನಿವಾರ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದು, ಹಾಜರಾತಿ ಪ್ರಕಾರ ಸರತಿಯಾಗಿ ಕೊಠಡಿಯ ಕಸವನ್ನು ಸ್ವಚ್ಛ ಮಾಡುವುದು. ಈಗಿನ ಕಾಲದಂತಹ ಗ್ರೀನ್ ಬೋರ್ಡ್, ಸಿಮೆಂಟ್ ಬೋರ್ಡ್ ಗಳು ತರಗತಿ ಕೊಠಡಿಗಳಲ್ಲಿ ಇರಲಿಲ್ಲ ಬದಲಾಗಿ ಬ್ಲಾಕ್ ಬೋರ್ಡ್ (ಕಪ್ಪು ಹಲಗೆ) ಇರುತ್ತಿತ್ತು ಅದಕ್ಕೆ ತೊಂಡೆ ಸೊಪ್ಪು ಮತ್ತು ಇದ್ದಿಲನ್ನು ಸೇರಿಸಿ ರುಬ್ಬಿ ಕಪ್ಪು ಹಲಗೆಗೆ  ಹಚ್ಚಬೇಕಾಗಿತ್ತು.

- Advertisement - 

ಇನ್ನು ರಾಷ್ಟ್ರೀಯ ಹಬ್ಬಗಳು ಬಂದರೆ ಶಾಲೆಯ ಆವರಣ ಅಷ್ಟೇ ಅಲ್ಲದೆ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದು, ಧ್ವಜದ ಕಟ್ಟೆಯನ್ನು ಕಟ್ಟುವುದು, ಬಣ್ಣ ಬಣ್ಣದ ಕಾಗದಗಳನ್ನು ಅಲಂಕೃತವಾಗಿ ಕತ್ತರಿಸಿ ಕೊಠಡಿಗಳನ್ನು ಸಿಂಗರಿಸುವುದು, ಪೂಜೆಗೆ ಬೇಕಾದ ಹೂವು, ಹಣ್ಣು, ಅಗರಬತ್ತಿ ಇತ್ಯಾದಿಗಳನ್ನು ತರುವುದು, ಶಾಲೆಗೆ ಯಾರಾದರೂ ಅಧಿಕಾರಿಗಳು ಭೇಟಿ ನೀಡಿದಾಗ ಹೋಟೆಲ್ ನಿಂದ ಟೀ ಕಾಫಿಯನ್ನು ತರುವುದು ಸಹ. ಈ ಎಲ್ಲಾ ಕೆಲಸಗಳು ವಿದ್ಯಾರ್ಥಿಗಳದ್ದೇ ಆಗಿರುತ್ತಿತ್ತು..

ಶಿಕ್ಷಕರು ವಿದ್ಯಾರ್ಥಿಗಳ ಕೈಲಿ ಸಾಧ್ಯವಾಗುವ ಶಾಲೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಶಾಲಾ ಹಂತಗಳಲ್ಲಿಯೇ ಶಿಕ್ಷಕರು ತಿಳಿಸಿಕೊಡುತ್ತಿದ್ದರು. ಮಾನವನ ಮೂಲಭೂತ ಕರ್ತವ್ಯಗಳಲ್ಲಿ ಪರಿಸರ ಸಂರಕ್ಷಣೆಯು ಒಂದು. ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಆಟ ಪಾಠದ ಜೊತೆಗೆ ಜವಾಬ್ದಾರಿಗಳನ್ನು ಕಲಿಸುತ್ತಾರೆ. ಬಿ.ಇಡಿ ತರಗತಿಗಳಲ್ಲಿ ಶ್ರಮದಾನ ಎಂಬ ಕ್ಯಾಂಪ್, ಪದವಿ ಕಾಲೇಜುಗಳಲ್ಲಿ ಎನ್.ಎಸ್.ಎಸ್ ಕ್ಯಾಂಪ್ ಗಳ ಮೂಲಕ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾರೆ.

- Advertisement - 

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿ, ಜ್ಞಾನಾರ್ಜನೆ, ಕೌಶಲ್ಯ ವೃದ್ಧಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ನಿರಂತರ ಪ್ರಕ್ರಿಯೆ, ಮಾನವನ ಆಂತರಿಕ ಶಕ್ತಿಯನ್ನು ಹೊರ ತರುವ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜೀವನಕ್ಕೆ ಸಿದ್ಧಗೊಳಿಸುವ ಪ್ರಕ್ರಿಯೆ ಮತ್ತು ನಾಗರೀಕತೆಯ ವಿಕಾಸಕ್ಕೆ ಅಗತ್ಯವಾಗಿದೆ.

 ಈಗಿನ ಮಕ್ಕಳಿಗೆ ಮನೆ ಕೆಲಸವೂ ಇಲ್ಲ, ಶಾಲೆಯ ಕೆಲಸವೂ ಇಲ್ಲ. ಬರೀ ಓದು ಓದು, ಟ್ಯೂಷನ್, ಒಂದಿಷ್ಟು ಕ್ಲಾಸ್ ಗಳು. ಟಿವಿ, ಮೊಬೈಲ್ ಮುಗಿದೇ ಹೋಯಿತು, ದೈಹಿಕ ಚಟುವಟಿಕೆಗಳನ್ನೇ ಮರೆತಿದ್ದಾರೆ. ಇನ್ನೂ ಎಲ್ಲಿ ಆದರೂ ಕೆಲ ಸರಕಾರಿ ಶಾಲೆಗಳಲ್ಲಿ ನಮ್ಮ ಕಾಲದಂತಹ ಆಟ, ಪಾಠ, ಕೆಲಸ ಈಗಲೂ ಇದೆ ಎಂದಾದರೆ ಯಾರಾದರೂ ಪುಣ್ಯಾತ್ಮರು ಹೋಗಿ ವೀಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟು ಬಿಡುತ್ತಾರೆ. ಅಸಲಿಗೆ ಅವರ ಮಕ್ಕಳೂ ಆ ಶಾಲೆಗೆ ಹೋಗುವವರಲ್ಲ. ಆದರೂ ಮಕ್ಕಳ ಕೈಯಲ್ಲಿ ಯಾಕೆ ಕೆಲಸ ಮಾಡಿಸೋದು ಅಂತ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ.

ಇಂದಿನ ಈ ಸೋಶಿಯಲ್ ಮೀಡಿಯಾದ  ಲೈಕ್, ಪಾಲೋವರ್ಸ್ ಹುಚ್ಚು ಅದೆಷ್ಟು ತಲೆಗೇರಿದೆ ಎಂದರೆ ಒಟ್ಟಿನಲ್ಲಿ ಯಾವುದು ಸರಿ, ತಪ್ಪು ಎನ್ನುವ ವಿವೇಕ ತುಂಬಿದ ಆಲೋಚನೆ ಮಾಡಲಾರರು. ಕೈಯಲ್ಲಿ ಮೊಬೈಲ್ ಇದೆ ಎಂದಾಕ್ಷಣ ಥಟ್ ಅಂತ ವೀಡಿಯೊ ಮಾಡಿ ಬಾಯಿಗೆ ಬಂದಂತೆ ಹಾಕಿ ಬಿಡೋದೇ. ಅದನ್ನು ನೋಡುವವರು ಕೂಡ ಇವರಿಗೇ ಜೈ ಎಂದು ಬಿಡುತ್ತಾರೆ, ಮಾಧ್ಯಮಗಳಲ್ಲಿ ಶಿಕ್ಷಣ ಸಚಿವರೇ, ಮಕ್ಕಳ ಆಯೋಗದವರೇ ಎಂದು ಕೂಗಾಡುತ್ತಾ ಚಿರುತ್ತಾರೆ. ಶಾಲೆಗಳಲ್ಲಿ ಮಕ್ಕಳ ಕೈಯಲ್ಲಿ ಯಾವ ಕೆಲಸ ಆಗುತ್ತದೋ ಅಷ್ಟೇ ಮಾಡಿಸುತ್ತಾರೆ. ಬರೀ ಕೆಲಸ ಮಾತ್ರ ಮಾಡಿಸಲಾರರು. ಜೊತೆಗೆ ಆಟ, ಪಾಠ ಹೇಳಿಕೊಡುವ ಕರ್ತವ್ಯ ಶಿಕ್ಷಕರಿಗೂ ತಿಳಿದೇ ಇರುತ್ತದೆ. ಎಲ್ಲೋ ಕೆಲ ಶಿಕ್ಷಕರು ದುರ್ಬಳಕೆ ಮಾಡಿಕೊಂಡರೂ ಕೂಡ ಇನ್ನೂ ಶಿಕ್ಷಕರ ಕರ್ತವ್ಯ ನಿಷ್ಠೆ ಜೀವಂತವಾಗಿ ಇದೆ. ನಮ್ಮ ಶಾಲೆ, ನಮ್ಮ ಮಕ್ಕಳು ಎನ್ನುವ ಹೆಮ್ಮೆ ಅವರಲ್ಲಿಯೂ ಇರುತ್ತದೆ. 

ಹಿಂದೆ ಮುಂದೆ ವಿಚಾರಿಸದೆ ಕಣ್ಣಿಗೆ ಕಂಡ ಸತ್ಯ ಮಾತ್ರ ಅರಚೋದಲ್ಲ.ಅಂತಹ ಶಾಲೆಗೆ ಹೋಗಿ ಅಲ್ಲಿನ ವಾತಾವರಣ, ಮಕ್ಕಳ ಕಲಿಕೆ, ಶೈಕ್ಷಣಿಕ ಅಭಿವೃದ್ಧಿ ಎಲ್ಲವನ್ನೂ ಅರಿತು, ಸೂಕ್ಷ್ಮ ಅವಲೋಕನ ಮಾಡಿ ಏನಾದರೂ ಮಕ್ಕಳನ್ನು ಶಿಕ್ಷಕರು ದುರುಪಯೋಗ ಪಡಿಸಿಕೊಳ್ಳುವುದು ಖಚಿತವಾದಾಗ ಸಮಾಜಕ್ಕೆ ತೋರಿಸಬೇಕು. ಅದು ಬಿಟ್ಟು ಆಗಷ್ಟೇ ಕಣ್ಣಿಗೆ ರಾಚಿದ್ದನ್ನು ಹಿಂದೆ ಮುಂದೆ ಯೋಚಿಸದೇ ತಪ್ಪು ಎಂದು ನಿರೂಪಿಸಲು ಹೋಗಿ ಮಕ್ಕಳ ಭವಿಷ್ಯಕ್ಕೇ ಕೊಳ್ಳಿ ಇಡಬಾರದು.
ಲೇಖನ
:ವೇಣುಕುಮಾರ್. ಎಂ, ಭರಂಪುರ. ಹಿರಿಯೂರು.

Share This Article
error: Content is protected !!
";