ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾರ್ಮಿಕ ದಿನಾಚರಣೆಯಂದು ಕೆಲಸಗಾರರಿಗೆ ರಜೆ ಕೊಡದೆ ಖಾಸಗಿ ಕಂಪನಿಯೊಂದು ಕರ್ತವ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿ ಕನ್ನಡಾಂಬೆ ಚಿರಋಣಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕೈಗಾರಿಕೆ ಒಂದು ತನ್ನ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆ ಪ್ರಯುಕ್ತ ರಜೆ ಘೋಷಿಸದೆ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ
ರವಿ ಮಾವಿನಕುಂಟೆ ಇವರ ಸಾರಥ್ಯದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಕಾರ್ಖಾನೆ ಮುಂಭಾಗ ಪ್ರತಿಭಟನೆ ಮಾಡಿದರು. ಕಾರ್ಖಾನೆಯ ಒಳಗೆ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಕಾರ್ಮಿಕರನ್ನು ಪ್ರತಿಭಟನೆಗೆ ಮಣಿದ ಕಾರ್ಖಾನೆ ಸಿಬ್ಬಂದಿ ರಜೆ ನೀಡಿ ಮನೆ ಕಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಎಸ್. ಸುಬ್ರಮಣಿ ಮಾತನಾಡಿ ಕಾರ್ಮಿಕರಿಗಾಗಿ ಇರುವ ವಿಶೇಷ ದಿನವಾದ ಕಾರ್ಮಿಕರ ದಿನಾಚರಣೆಯಂದು ಸಹ ಕೆಲಸ ಮಾಡುತ್ತಿರುವುದು ಖಂಡನೀಯ ಸ್ಥಳೀಯವಾಗಿ ಗಮನಿಸಬೇಕಾಗಿರುವ ಅಧಿಕಾರಿ ವರ್ಗ ಸುಮ್ಮನೆ ಕುಳಿತಿರುವುದು ವಿಪರ್ಯಾಸವೆ ಸರಿ, ಕಾರ್ಮಿಕರ ದಿನಾಚರಣೆಯನ್ನು ಸಂಭ್ರಮಿಸದೆ ಅಂದು ಸಹ ಕೇವಲ ದುಡ್ಡಿನ ಆಮಿಷಕ್ಕೆ ಒಳಗಾಗಿ ಕಾರ್ಮಿಕರ ದುಡಿಸಿಕೊಳ್ಳುತ್ತಿರುವ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ, ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ದೊಡ್ಡ ತುಮಕೂರು ಯಮನೂರು, ಪ್ರಕಾಶ್, ಹೇಮಂತ್, ಶಿವಕುಮಾರ್, ಅನ್ನದಾಸೋಹಿ ಮಲ್ಲೇಶ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.