ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಇಲಾಖೆಗೇ ಅನಾರೋಗ್ಯ ಬಡಿದುಕೊಂಡಿದೆ. ಆರೋಗ್ಯ ಇಲಾಖೆ ಪ್ರತಿದಿನವೂ ಒಂದಲ್ಲ ಒಂದು ವಿವಾದಕ್ಕೆ ತುತ್ತಾಗುತ್ತಲೇ ಇದೆ. ಸ್ವತಃ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಆರೋಗ್ಯ ಇಲಾಖೆಯ ಕುರಿತು ಯಾವುದೇ ಕಾಳಜಿ ಇದ್ದಂತಿಲ್ಲ.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರ ಖಾಲಿ ಹುದ್ದೆ ಭರ್ತಿ ಮಾಡದೆ, ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ವರ್ಗ ಮಾಡುವ ಲೆಕ್ಕಾಚಾರಗಳನ್ನು ಇಲಾಖೆ ಹಾಕಿಕೊಂಡಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಟೀಕಾಪ್ರಹಾರ ಮಾಡಿದ್ದಾರೆ.
ಗ್ರಾಮೀಣ ಪ್ರದೇಶಗಳ ಜನರು ತಮ್ಮ ಆರೋಗ್ಯಕ್ಕಾಗಿ ಇವೇ ಸಿಹೆಚ್ಸಿಗಳನ್ನೇ ಅವಲಂಬಿಸಿದ್ದಾರೆ. ಏಕಾಏಕಿ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿಬಿಟ್ಟರೆ, ಸಿಹೆಚ್ಸಿಗಳನ್ನು ನಂಬಿರುವ ರೋಗಿಗಳ ಗತಿಯೇನು?
ಈಗಾಗಲೇ ಸರ್ಕಾರ ಹಣ ಪಾವತಿ ಬಾಕಿ ಉಳಿಸಿರುವ ಪರಿಣಾಮವಾಗಿ, ಡಯಾಲಿಸಿಸ್, ಎಂಆರ್ಐನಂತಹ ಮುಖ್ಯ ಸೇವೆಗಳೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಗಿತಗೊಂಡಿವೆ. ಇನ್ನು ಸಿಹೆಚ್ಸಿಗಳ ವೈದ್ಯರನ್ನೇ ವರ್ಗಾವಣೆ ಮಾಡಿಬಿಟ್ಟರೆ, ಗ್ರಾಮೀಣ ಪ್ರದೇಶಗಳ ಜನರ ತುರ್ತು ಅಗತ್ಯಕ್ಕೆ ಸೇವೆ ನೀಡುವುದು ಯಾರು? ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಜನರ ಜೀವದೊಡನೆ ಚೆಲ್ಲಾಟವಾಟುವುದನ್ನು ತಕ್ಷಣವೇ ನಿಲ್ಲಿಸಿ, ಇಂತಹ ತುಘಲಕ್ ನಿರ್ಧಾರಗಳನ್ನು ಕೈಬಿಡಬೇಕು ಎಂದು ರವಿ ಅವರು ಆಗ್ರಹ ಮಾಡಿದ್ದಾರೆ.

