ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಳೆಗಾಲದ ಅಧಿವೇಶನ ಆರಂಭದಲ್ಲಿ ರಾಜಕೀಯ, ಸಿನಿಮಾ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾವನ್ನಪ್ಪಿದ ಗಣ್ಯರಿಗೆ ವಿಧಾನ ಪರಿಷತ್ನಲ್ಲಿ ಒಕ್ಕೊರಲಿನಿಂದ ಸಂತಾಪ ಸೂಚಿಸಿ ಗೌರವ ಸಲ್ಲಿಸಲಾಯಿತು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮೆಯೋನ್, ಸದನದ ಮಾಜಿ ಸದಸ್ಯ ಡಾ.ಎನ್.ತಿಪ್ಪಣ್ಣ, ಮಾಜಿ ಸಚಿವ ಬೇಗಾನೆ ರಾಮಯ್ಯ, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್, ವಿಮರ್ಶಕ ಜಿ.ಎಸ್.ಸಿದ್ದಲಿಂಗಯ್ಯ, ಕೃಷಿ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪನ್, ಹಿರಿಯ ಪರಮಾಣು ವಿಜ್ಞಾನಿ ಡಾ.ಎಂ.ಆರ್.ಶ್ರೀನಿವಾಸ್, ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಬಹುಭಾಷಾ ನಟಿ ಡಾ.ಬಿ.ಆರ್.ಸರೋಜಾದೇವಿ ಅವರು ನಿಧನವಾಗಿದ್ದು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮೇಲ್ಮನೆ ನಾಯಕ ಬೋಸರಾಜು, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವ ಈಶ್ವರ್ ಖಂಡ್ರೆ, ಆಡಳಿತ ಪಕ್ಷದ ಸಚೇತಕ ಸಲೀಂ, ಸದಸ್ಯರಾದ ಸಿ.ಟಿ. ರವಿ, ಐವಾನ್ ಡಿಸೋಜಾ, ಉಮಾಶ್ರೀ ಅಗಲಿದ ಗಣ್ಯರ ಬಗ್ಗೆ ಗುಣಗಾನ ಮಾಡಿದರು.
ಜೆಡಿಎಸ್ ಸದಸ್ಯ ಶರವಣ ಮಾತನಾಡಿ, ಆರ್ಸಿಬಿ ವಿಜಯೋತ್ಸವ ವೇಳೆ ಪ್ರಾಣ ಕಳೆದುಕೊಂಡಿದ್ದ 11 ಮಂದಿಗೂ ಸಂತಾಪ ಸೂಚಿಸುವುದು ಸೂಕ್ತ ಎಂದು ಹೇಳಿದರು.
ಈ ಬಗ್ಗೆ ಗೊತ್ತಾಗಿಲ್ಲ. ನಂತರ ನೋಡೋಣ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ನಟಿ ಸರೋಜಸದೇವಿ ವಾಸವಾಗಿದ್ದ ಮಲೇಶ್ವರಂ 11ನೇ ಅಡ್ಡರಸ್ತೆಗೆ ಸರೋಜಾದೇವಿ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಲಾಯಿತು.

