ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಕೈಯಿಂದ ಕೊಟ್ಟಂತೆ ಮಾಡಿ ಎರಡೂ ಕೈಯಿಂದ ಕಿತ್ತುಕೊಳ್ಳುವುದು ಕಾಂಗ್ರೆಸ್ ಗ್ಯಾರಂಟಿ ಫಾರ್ಮುಲಾ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೂರಿದ್ದಾರೆ.
ಒಂದೆಡೆ ಹೆಣ್ಣು ಮಕ್ಕಳಿಗೆ ‘ಉಚಿತ‘ ಎಂದು ಬಸ್ ಹತ್ತಿಸಿ, ಇನ್ನೊಂದೆಡೆ, ಟಿಕೆಟ್ ದರ ಏರಿಕೆ, ನಂತರ ಈಗ ಲಗೇಜ್ ಮೇಲೆ 15% ದರ ಏರಿಸಿ, ಜನರನ್ನು ಮತ್ತಷ್ಟು ಲೂಟಿ ಮಾಡಲು ಮುಂದಾಗಿದೆ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ! ಈಗ ಜಾರಿಗೆ ಬಂದಿರುವ ಕೆಎಸ್ ಆರ್ ಟಿಸಿ ಲಗೇಜ್ ದರ ಏರಿಕೆ ಕೇವಲ ದರವಲ್ಲ, ಇದು ಈ ಕಾಂಗ್ರೆಸ್ ಸರ್ಕಾರ, ಸಣ್ಣ ವ್ಯಾಪಾರಿಗಳು ಮತ್ತು ರೈತರ ಬೆನ್ನಿಗೆ ದಾಟಿಸಿದ ತನ್ನ ಹೊರೆ. ಉಚಿತ ಭಾಗ್ಯದ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿರುವುದೇ ನಿಮ್ಮ ಜನಪರ ಆಡಳಿತವೇ ಮಾನ್ಯ ಮುಖ್ಯಮಂತ್ರಿಗಳೇ? ಎಂದು ಅವರು ಪ್ರಶ್ನಿಸಿದ್ದಾರೆ.
ತನ್ನ ‘ಗ್ಯಾರಂಟಿ‘ಗಳ ಹೊರೆ ಹೊರಲು ತನ್ನಿಂದ ಆಗುತ್ತಿಲ್ಲ ಎನ್ನುವುದನ್ನು ಸಾಬೀತು ಮಾಡಲು ಈಗ ಲಗೇಜ್ ದರವನ್ನು ಹೆಚ್ಚಿಸಿದೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ. ಸಾರಿಗೆ ಸಂಸ್ಥೆಯನ್ನು ನಷ್ಟಕ್ಕೆ ದೂಡಿ, ಸದ್ದಿಲ್ಲದೆ ದರ ಏರಿಸುವ ಮೂಲಕ ಸರ್ಕಾರವೇ ಜನಸಾಮಾನ್ಯರ ಲೂಟಿಗೆ ಇಳಿದಿದೆ. ಜನರಿಗೆ ಅನುಕೂಲ ಕಲ್ಪಿಸುವುದಿರಲಿ, ಹೆಚ್ಚಿನ ಅನಾನುಕೂಲ ಕಲ್ಪಿಸಿ, ಅದಕ್ಕೂ ಜನರೇ ಹೆಚ್ಚಿನ ತೆರಿಗೆ ಕಟ್ಟಬೇಕು ಎನ್ನುವ ತುಘಲಕ್ ಸೂತ್ರಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಜನರ ಲಗೇಜ್ ಮೇಲೂ ಅಧಿಕ ಕಪ್ಪ ವಸೂಲಿಗೆ ಇಳಿದಿರುವ ಈ ಲೂಟಿ ಸರ್ಕಾರಕ್ಕೆ ರಾಜ್ಯದ ಜನರೇ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

