ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಬದುಕಿಲ್ಲ. ರಾಜಕೀಯಮೇಲಾಟಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಿಲ್ಲರ್ ಕಾಂಗ್ರೆಸ್ ಸರ್ಕಾರ ಎಂಬ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ನಿರಂತರವಾದ ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 1,800ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳಾಗಿವೆ. ಬಲೂನ್ ಮಾರಾಟಕ್ಕೆ ಬಂದಿದ್ದ ಬಾಲಕಿಯ ಮೇಲೆ ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿಯೇ ಅತ್ಯಾಚಾರ ಮತ್ತು ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾಯಿತು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಲಾಯಿತು. ಮೂಡುಬಿದಿರೆಯ ಉಪನ್ಯಾಸಕ ತನ್ನ ವಿದ್ಯಾರ್ಥಿನಿಯನ್ನ ಬೆಂಗಳೂರಿಗೆ ಕರೆತಂದು ಅತ್ಯಾಚಾರ ಎಸಗುತ್ತಾನೆ. ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತಿರುವುದರಿಂದ ಈ ರೀತಿಯ ಧೈರ್ಯ ಅಪರಾಧಿಗಳಿಗೆ ಬಂದಿದೆ ಎಂದು ಟೀಕಿಸಿದರು.
ಯಾರು ಸಿಎಂ ಆಗಬೇಕು, ಯಾರು ಡಿಸಿಎಂ ಆಗಬೇಕು, ಯಾರ ಮಂತ್ರಿಗಿರಿ ಉಳಿಸಿಕೊಳ್ಳಬೇಕು ಎನ್ನುವುದರಲ್ಲಿಯೇ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಹರಿಹಾಯ್ದರು.

ಜನರ ಜೀವಗಳಿಗೆ ಗ್ಯಾರಂಟಿ ಏನು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಎರಡೂವರೆ ವರ್ಷದಲ್ಲಿ ಸುಮಾರು 20ಕ್ಕೂ ಅಧಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಸಮೀಕ್ಷೆಯ ಒತ್ತಡ ತಾಳಲಾರದೇ ಕೆಲವರು ಬಿದ್ದು, ಇನ್ನೂ ಕೆಲವರು ಹೃದಯಾಘಾತದಿಂದ 6ಕ್ಕೂ ಅಧಿಕ ಜನ ಅಸುನೀಗಿದರು.
15ಕ್ಕೂ ಹೆಚ್ಚಿನ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಗುತ್ತಿಗೆದಾರರು ದಯಾಮರಣ ಕೋರಿ ಪತ್ರ ಬರದಿದ್ದಾರೆ. ಹಾಗಾದರೆ ಜನರ ಪ್ರಾಣಗಳಿಗೆ ಗ್ಯಾರಂಟಿ ಯಾರು? ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಹಿಡಿತವಿಲ್ಲದ ದುರ್ಬಲ ಗೃಹ ಸಚಿವರನ್ನಿಟ್ಟುಕೊಂಡು ರಾಜ್ಯ ನಡೆಸಲು ಹೇಗೆ ಸಾಧ್ಯ ಎಂದು ಶೋಭಾ ಕರಂದ್ಲಾಜೆ ಅವರು ವಾಗ್ದಾಳಿ ಮಾಡಿದರು.
ಬೆಂಗಳೂರಿನಲ್ಲಿ ಕೆಲಸಕ್ಕೆ ಹೊರಟವರು ವಾಪಸ್ ಬರುತ್ತಾರೆಂಬ ಗ್ಯಾರಂಟಿಯಿಲ್ಲ. ಬೈಕ್ ಸವಾರರು ರಸ್ತೆ ಗುಂಡಿಗೆ ಬಿದ್ದು ಸಾಯುತ್ತಿದ್ದಾರೆ. ಅತೀ ಹೆಚ್ಚು ಮಾದಕ ಪದಾರ್ಥಗಳನ್ನ ಬಳಸುವ ರಾಜಧಾನಿಯಾಗಿ ಬೆಂಗಳೂರು ಬದಲಾಗುತ್ತಿದೆ. ಯಾರನ್ನೋ ಧರ್ಮದ ಆಧಾರದಲ್ಲಿ, ಯಾರನ್ನೋ ಜಾತಿಯ ಆಧಾರದಲ್ಲಿ ರಕ್ಷಿಸುವ ಮೂಲಕ ಪೊಲೀಸ್ ಇಲಾಖೆಯ ಹೆಸರು ಕೆಡಿಸಿದ್ದೀರಿ. ನೀವು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುತ್ತೀರೋ, ಬೇರೆಯವರಿಗೆ ಸ್ಥಾನ ಬಿಟ್ಟುಕೊಡುತ್ತೀರೋ, ಮಂತ್ರಿಮಂಡಲ ಬದಲಾವಣೆಯಾಗುತ್ತದೆಯೋ, ಇಲ್ಲವೋ ಅದು ನಿಮಗೆ ಬಿಟ್ಟ ವಿಚಾರ. ಆದರೆ ಮುಗ್ದ ಜನರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡುತ್ತೀರಾ ಎಂದು ಕೇಂದ್ರ ಸಚಿವೆ ಖಾರವಾಗಿ ಪ್ರಶ್ನಿಸಿದರು.
ಹಣ ನೀಡಲು ಸ್ಪರ್ಧೆ:
ತೆಲಂಗಾಣ ಚುನಾವಣೆಗಾಗಿ ರಾಜ್ಯದ ನಿಗಮಗಳಲ್ಲಿ ಭ್ರಷ್ಟಾಚಾರ ಮಾಡಿದರು. ಈಗ ಬಿಹಾರದ ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ಹೈಕಮಾಂಡ್ಗೆ ಸಿದ್ಧರಾಮಯ್ಯ ಎಷ್ಟು ಹಣ ಕೊಡುತ್ತಾರೆ. ಡಿ.ಕೆ.ಶಿವಕುಮಾರ್ ಎಷ್ಟು ಹಣ ಕೊಡುತ್ತಾರೆ ಎಂಬ ಪ್ರತಿಸ್ಪರ್ಧೆ ಏರ್ಪಟ್ಟಿದೆ. ಸಿದ್ಧರಾಮಯ್ಯ ಅವರ ಮೂಗಿನ ನೇರಕ್ಕೆ ಸರ್ಕಾರ ನಡೆಯುತ್ತಿದೆ. ಇದಕ್ಕಾಗಿ ರಾಜ್ಯದ ಜನತೆ ನಾಶವಾಗುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಾಪ್ರಹಾರ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಹೇಮಲತಾ ನಾಯಕ್ ಸೇರಿದಂತೆ ಬಿಜೆಪಿಯ ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.

