ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಪಾಲ ಗೆಹ್ಲೋಟ್ ಅವರು ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ ವೇಳೆ ಸರ್ಕಾರ ನೀಡಿದ್ದ ಭಾಷಣ ಓದದೆ ಕೇವಲ ಎರಡೇ ಮಾತುಗಳಲ್ಲಿ ಶುಭಾಶಯ ಕೋರಿ ಹೊರನಡೆದ ಘಟನೆ ಸದನದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಯಿತು.
ರಾಜ್ಯಪಾಲರ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.
ಈ ಅನಿರೀಕ್ಷಿತ ನಡೆಯಿಂದ ಆಘಾತಕ್ಕೊಳಗಾದ ಶಾಸಕ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯಪಾಲರು ಹೊರಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿ ಸಂಪೂರ್ಣ ಭಾಷಣ ಓದುವಂತೆ ಪಟ್ಟು ಹಿಡಿದ ಪ್ರಸಂಗವೂ ನಡೆಯಿತು.
ಆದರೆ, ರಾಜ್ಯಪಾಲ ಗೆಹ್ಲೋಟ್ ಅವರು ಇದನ್ನು ಲೆಕ್ಕಿಸದೆ ತಮ್ಮ ಪೂರ್ವ ನಿರ್ಧಾರದಂತೆ ಸದನದಿಂದ ಹೊರನಡೆದರು.
ಮುಖ್ಯಮಂತ್ರಿಗಳು, ಸ್ಪೀಕರ್, ಸಭಾಪತಿಗಳು ಮತ್ತು ಕಾನೂನು ಸಚಿವರು ಗೌರವಾರ್ಥವಾಗಿ ರಾಜ್ಯಪಾಲರನ್ನು ವಾಹನದವರೆಗೂ ಬೀಳ್ಕೊಟ್ಟರು.

