ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್ಪಿಜಿ ಸಂಕಷ್ಟಕ್ಕೆ ಪರಿಹಾರ ಬೇಕು, ಕಾರಣಗಳಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಎಲ್ಪಿಜಿ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಜನರಿಗೆ ತಕ್ಷಣದ ಪರಿಹಾರ ದೊರಕುವಂತೆ ಮೋದಿ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಭಾ ಆಗ್ರಹಿಸಿದ್ದಾರೆ.
ಮೋದಿ ಸರ್ಕಾರದ ಅವಧಿಯಲ್ಲಿ ಎಲ್ಪಿಜಿ ಗ್ಯಾಸ್ ಕೊರತೆಯಿಂದ ದೇಶವೇ ಕಂಗೆಟ್ಟಿದೆ. ಪ್ರಧಾನಿಯವರು ಟ್ರಂಪ್ ಎದುರು ಶರಣಾಗಿದ್ದರಿಂದ ಸಂಪೂರ್ಣ ದೇಶವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.
ಪರಿಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿದ್ದು, ಜನರು ಎಲ್ಪಿಜಿ ಸಿಲಿಂಡರ್ ಪಡೆಯಲು ಉದ್ದವಾದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಕುರಿತು ಇಂದು ಸಂಸತ್ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದರಾದ ಪ್ರಿಯಾಂಕ ಗಾಂಧಿ ಅವರೊಂದಿಗೆ ಭಾಗವಹಿಸಿ ಮೋದಿ ಸರ್ಕಾರದ ಈ ಶರಣಾಗತಿ ನೀತಿಯನ್ನು ಖಂಡಿಸಲಾಯಿತು.
ಜನರಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ, ಸರ್ಕಾರವೂ ಸಮಸ್ಯೆ ಪರಿಹರಿಸಲು ಕಾಣಿಸುತ್ತಿಲ್ಲ ಎಂದು ಡಾ.ಪ್ರಭಾ ದೂರಿದರು.

