ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಕುರ್ಚಿ ಕಾಳಗದಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಆಂತರಿಕ ಭಿನ್ನಾಭಿಪ್ರಾಯಗಳು, ವಿವಿಧ ರೀತಿಯ ಶಾಸಕರುಗಳ ಹೇಳಿಕೆಗಳಿಂದ ಹೈಕಮಾಂಡ್ ನಿದ್ದೆಗೆಟ್ಟಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ನಾಲ್ಕು ಮಂದಿ ಪರಿಷತ್ ಸದಸ್ಯರ ಹೆಸರು ಅಂತಿಮಗೊಳಿಸುವ ಕುರಿತು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ನೇಮಕ, ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕದ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.
ರಾಜ್ಯ ನಾಯಕತ್ವ ವಿಚಾರ ಪದೇ ಪದೇ ಪ್ರಸ್ತಾಪವಾಗುತ್ತಿರುವುದು, ಮಠಾಧೀಶರು, ಶಾಸಕರಿಂದ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು, ಇಂತಹ ಘಟನೆಗಳಿಂದ ಆಡಳಿತಶಾಹಿ ನಿಯಂತ್ರಣ ತಪ್ಪುವ ಭೀತಿ ಕುರಿತು ಗಂಭೀರವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುರ್ಜೆವಾಲಾ ಅವರೊಂದಿಗಿನ ಸಭೆಯಲ್ಲಿ ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಖಾಲಿ ಇರುವ ನಾಲ್ಕು ಪರಿಷತ್ ಸದಸ್ಯರ ನೇಮಕದ ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಖಾಲಿಯಿರುವ ಎಂಟು ನಿಗಮ-ಮಂಡಳಿ ಅಧ್ಯಕ್ಷರ ಹುದ್ದೆ ಹಾಗೂ ಉಪಾಧ್ಯಕ್ಷರು ಸೇರಿ ಒಟ್ಟು 40 ಹುದ್ದೆಗಳ ನೇಮಕದ ಕುರಿತು ಚರ್ಚೆ ನಡೆಸಲಿದೆ ಎನ್ನಲಾಗಿದೆ.
ಡಿಕೆ.ಶಿವಕುಮಾರ್ ಮಾತನಾಡಿ, ಮುಂದಿನ ವಿಧಾನಸಭಾ ಅಧಿವೇಶನಕ್ಕೂ ಮುನ್ನ ನಾಲ್ಕು ಎಂಎಲ್ಸಿಗಳ ನಾಮನಿರ್ದೇಶನ ನಡೆಯಲಿದೆ ಎಂದು ಹೇಳಿದರು.
ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಬೆಂಗಳೂರಿನಲ್ಲಿ ಕೆಲವು ರಸ್ತೆ ಅಗಲೀಕರಣ ಯೋಜನೆಗಳಿಗೆ ರಕ್ಷಣಾ ಭೂಮಿ ಅಗತ್ಯವಿರುವುದರಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ನಾವು ದೆಹಲಿಗೆ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.