ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಹೆಮ್ಮೆಯ ‘ಮೈಸೂರು ಸಿಲ್ಕ್‘ ಸಂಸ್ಥೆಯ ಮೇಲೆ ಕಾಂಗ್ರೆಸ್ ಭೂಗಳ್ಳರ ವಕ್ರದೃಷ್ಟಿ! ಬಿದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ.
ಕರ್ನಾಟಕದ ಹೆಮ್ಮೆಯ ಪಾರಂಪರಿಕ ಪ್ರತೀಕವಾದ ‘ಮೈಸೂರು ಸಿಲ್ಕ್‘ ಅಸ್ತಿತ್ವಕ್ಕೆ ಕಾಂಗ್ರೆಸ್ ಸರ್ಕಾರ ಸಂಚಕಾರ ತಂದಿದೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (KSIC) ವ್ಯವಸ್ಥಾಪಕ ನಿರ್ದೇಶಕರು ಈ ಜಾಗ ನಮಗೆ ಅತ್ಯಗತ್ಯ ಎಂದು ಅಂಕಿ-ಅಂಶಗಳ ಸಮೇತ ತಾಂತ್ರಿಕ ವರದಿ ನೀಡಿದ್ದರೂ, ಕಾಂಗ್ರೆಸ್ ಸರ್ಕಾರ ಆ ಭೂಮಿಯನ್ನು ಕಬಳಿಸಲು ಹಠಕ್ಕೆ ಬಿದ್ದಿರುವುದು ಅತ್ಯಂತ ಖಂಡನೀಯ ಮತ್ತು ಈ ನಡೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕದ ಹೆಮ್ಮೆಯ ಪಾರಂಪರಿಕ ‘ಮೈಸೂರು ಸಿಲ್ಕ್‘ ಉದ್ಯಮವನ್ನು ಹೊಸಕಿ ಹಾಕಲೆಂದೇ ನಿಮ್ಮ ಕಾಂಗ್ರೆಸ್ ಸರ್ಕಾರ ಈಗ ರೇಷ್ಮೆ ನಿಗಮದ ಜಾಗಕ್ಕೆ ಕೈಹಾಕಿದಂತಿದೆ. ಟಿ.ನರಸೀಪುರದ ಕೆಎಸ್ಐಸಿ ಘಟಕದ ಮುಂದಿನ ಅಭಿವೃದ್ಧಿಗೆ, ಮಾಲಿನ್ಯ ನಿಯಂತ್ರಣ ಘಟಕ (ಇಟಿಪಿ) ಸ್ಥಾಪನೆಗೆ ಮತ್ತು ಹೆಚ್ಚುವರಿ ಉತ್ಪಾದನೆಗೆ ಆ 5 ಎಕರೆ ಜಾಗ ಅತ್ಯಗತ್ಯ ಎಂದು ಸ್ವತಃ ವ್ಯವಸ್ಥಾಪಕ ನಿರ್ದೇಶಕರೇ ವರದಿ ನೀಡಿದ್ದಾರೆ.
ಹೀಗಿದ್ದರೂ ಆ ಜಾಗವನ್ನು ಕ್ರೀಡಾಂಗಣದ ಹೆಸರಿನಲ್ಲಿ ಕಿತ್ತುಕೊಳ್ಳಲು ಸರ್ಕಾರ ಹಠಕ್ಕೆ ಬಿದ್ದಿರುವುದು ಯಾರ ಹಿತಾಸಕ್ತಿಗಾಗಿ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಒಂದು ಜನಪ್ರಿಯ, ಬೇಡಿಕೆಯುಳ್ಳ ಮತ್ತು ಲಾಭದಾಯಕ ಸಾರ್ವಜನಿಕ ಉದ್ದಿಮೆಯನ್ನ ವ್ಯವಸ್ಥಿತವಾಗಿ ಮುಗಿಸಿ, ಯಾವ ಖಾಸಗಿ ವ್ಯಕ್ತಿಗಳಿಗೆ/ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಹೊರಟಿದ್ದೀರಿ?
ಸರ್ಕಾರದ ಈ ಸಂಶಯಾಸ್ಪದ ನಿರ್ಧಾರದ ಹಿಂದೆ ಯಾವ ಲೂಟಿಯ ಸಂಚು ಅಡಗಿದೆ? ಮೈಸೂರು ಸಿಲ್ಕ್ ಬ್ರಾಂಡ್ ಅನ್ನು ಮುಗಿಸಲು ಹೊರಟಿರುವ ಆ ಕಾಣದ “ಕೈ”ಗಳು ಯಾವುದು? ಅಶೋಕ್ ಪ್ರಶ್ನಿಸಿದ್ದಾರೆ.
ತಾಂತ್ರಿಕ ವರದಿಗಿಲ್ಲ ಬೆಲೆ:
ರೇಷ್ಮೆ ನೂಲು ತೆಗೆಯುವ ಘಟಕಕ್ಕೆ ಪ್ರತಿ ದಿನ 5 ಲಕ್ಷ ಲೀಟರ್ ನೀರು ಬೇಕು. ಕ್ರೀಡಾಂಗಣ ನಿರ್ಮಾಣವಾದರೆ ನೀರಿನ ಪೈಪ್ಲೈನ್ಗಳಿಗೆ ಧಕ್ಕೆಯಾಗುತ್ತದೆ, ಇದರಿಂದ ಇಡೀ ಘಟಕವೇ ಸ್ಥಗಿತಗೊಳ್ಳುವ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಈ ವರದಿಗಿಂತ ಭೂಮಿ ಕಬಳಿಸುವುದೇ ಮುಖ್ಯವಾಯಿತೇ? ಎಂದು ವಿಪಕ್ಷ ನಾಯಕರು ಟೀಕಾಪ್ರಹಾರ ಮಾಡಿದ್ದಾರೆ.
ಕಾರ್ಮಿಕರ ಹೊಟ್ಟೆ ಮೇಲೆ ಹೊಡೆತ:
ಈ ಘಟಕದಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರ ಮತ್ತು ಅವರನ್ನು ನಂಬಿರುವ ಸಾವಿರಾರು ರೇಷ್ಮೆ ಬೆಳೆಗಾರರ ಭವಿಷ್ಯವನ್ನು ಕಾಂಗ್ರೆಸ್ ಸರ್ಕಾರ ಅಂಧಕಾರಕ್ಕೆ ತಳ್ಳುತ್ತಿದೆ.
ನಿಯಮಗಳ ಉಲ್ಲಂಘನೆ:
ಕಾರ್ಖಾನೆ ಕಾಯ್ದೆಯಡಿ ಶೇ.30 ರಷ್ಟು ಜಾಗವನ್ನು ಹಸಿರು ವಲಯಕ್ಕೆ ಬಿಡಬೇಕು ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲವೇ? ಆ ಜಾಗವನ್ನು ಕಿತ್ತುಕೊಂಡರೆ ಕಾರ್ಖಾನೆ ಕಾನೂನುಬಾಹಿರವಾಗಿ ಮುಚ್ಚುವ ಸ್ಥಿತಿಗೆ ಬರುತ್ತದೆ. ಸಿದ್ದರಾಮಯ್ಯನವರೇ, ಇದು ‘ಹಸ್ತ‘ದ ಹಪಾಹಪಿಯೇ?
ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಇವತ್ತು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಮೈಸೂರು ಸಿಲ್ಕ್ ಎಂಬ ನಮ್ಮ ಹೆಮ್ಮೆಯ ಬ್ರಾಂಡ್ ಅನ್ನು ಉಳಿಸಿ, ಬೆಳೆಸುವ ಬದಲು, ಅದಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದು ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ‘ಜನವಿರೋಧಿ‘, ನೀತಿಯ ಪರಮಾವಧಿ.
ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮೈಸೂರು ಸಿಲ್ಕ್ ಉದ್ಯಮವನ್ನು ನಾಶ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನ ಕನ್ನಡಿಗರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಕೂಡಲೇ ಈ ಆದೇಶವನ್ನು ಹಿಂಪಡೆದು, ರೇಷ್ಮೆ ಘಟಕದ ಅಸ್ತಿತ್ವವನ್ನು ಉಳಿಸದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಅಶೋಕ್ ಎಚ್ಚರಿಕೆ! ನೀಡಿದ್ದಾರೆ.

