ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ ಅವರು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ದಂಧೆ?
ಟ್ವಿಟರ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, “ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಡ್ರಗ್ಸ್ ದಂಧೆ ವಿಪರೀತವಾಗಿ ಬೆಳೆದು ಹಬ್ಬಿರುವುದು ನಿಜಕ್ಕೂ ಆತಂಕದ ಬೆಳವಣಿಗೆಯಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಯುವ ಸಮೂಹವನ್ನು ಬಲಿಪಡೆಯುತ್ತಿರುವ ಈ ಜಾಲದ ವಿರುದ್ಧ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.
ಪಂಜಾಬ್ ಸ್ಥಿತಿಗೆ ಹೋಲಿಕೆ-
ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯನ್ನು ಪಂಜಾಬ್ ರಾಜ್ಯದ ಹಳೆಯ ಸ್ಥಿತಿಗೆ ಹೋಲಿಸಿದ ರವಿ ಅವರು:
ಒಂದು ಕಾಲದಲ್ಲಿ ಪಂಜಾಬ್ ಹೇಗೆ ಮಾದಕ ದ್ರವ್ಯಗಳ ಜಾಲಕ್ಕೆ ಸಿಲುಕಿ ನರಳಿತೋ, ಈಗ ಕರ್ನಾಟಕ ಕೂಡ ಅದೇ ಹಾದಿಯಲ್ಲಿ ಸಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ.
”ಇಂದು ಕರ್ನಾಟಕದಲ್ಲೂ ‘ಉಡ್ತಾ ಕರ್ನಾಟಕ‘ ಆಗುತ್ತಿರುವ ಲಕ್ಷಣಗಳು ಎದ್ದುಕಾಣುತ್ತಿವೆ” ಎಂದು ರವಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಯುವಶಕ್ತಿ ಉಳಿಸಲು ಆಗ್ರಹ:
ಮಾದಕ ದ್ರವ್ಯಗಳು ಕೇವಲ ವ್ಯಕ್ತಿಯನ್ನಲ್ಲ, ಇಡೀ ದೇಶವನ್ನೇ ನಾಶಪಡಿಸುವ ಶಕ್ತಿ ಹೊಂದಿವೆ ಎಂದು ಎಚ್ಚರಿಸಿದ ಅವರು, ತಕ್ಷಣವೇ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
”ಮಾದಕ ದ್ರವ್ಯಗಳು ನಮ್ಮ ಯುವ ಜನರನ್ನು ಹಾಳುಗೆಡವಿ, ಆ ಮೂಲಕ ದೇಶವನ್ನೇ ನಾಶಪಡಿಸಲಿದೆ. ರಾಜ್ಯ ಸರ್ಕಾರ ತಕ್ಷಣವೇ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡು, ಡ್ರಗ್ಸ್ ಹಾವಳಿ ರಾಜ್ಯದಲ್ಲಿ ಹೆಡೆ ಎತ್ತದಂತೆ ಮಾಡಬೇಕು.”
ಸಿ.ಟಿ ರವಿ, ಶಾಸಕರು, ವಿಧಾನ ಪರಿಷತ್.

