ಸಿಲಿಂಡರ್​ ಸ್ಫೋಟ, ಇಬ್ಬರು ಗಂಭೀರ, ಮನೆಗಳು ಛಿದ್ರ

News Desk

ಚಂದ್ರವಳ್ಳಿ ನ್ಯೂಸ್, ಆನೇಕಲ್(ಬೆಂಗಳೂರು):
ಎಲ್​ಪಿಜಿ ಸಿಲಿಂಡರ್​ ಸ್ಫೋಟಗೊಂಡು ಭಾರಿ ಅನಾಹುತ ಸಂಭವಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ ತಾಲೂಕಿನಲ್ಲಿ ನಡೆದಿದೆ. ಕಿತ್ತಗಾನಹಳ್ಳಿ-ಚಂದಾಪುರ ಬಳಿಯ ಜಯನಗರ ಸುನಿಲ್ ಎಂಬುವರ ಬಾಡಿಗೆ ಮನೆಯಲ್ಲಿ ಸೋಮವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸಿಡಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ
, ಅಕ್ಕಪಕ್ಕದ ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.

- Advertisement - 

ಬೊಮ್ಮಸಂದ್ರ ಪುರಸಭಾ ವ್ಯಾಪ್ತಿಯ ಮೊದಲ ಅಂತಸ್ತಿನ ಮಹಡಿಯಲ್ಲಿ ಈ ದುರ್ಘಟನೆ ನಡೆದಿದ್ದು ಇಬ್ಬರಿಗೆ ಮೈಕೈ ಸುಟ್ಟು ಗಂಭೀರ ಗಾಯಗಳಾಗಿವೆ. ಸಂತ್ರಸ್ತ ಗಾಯಾಳುಗಳನ್ನು ಕೇರಳ ಮೂಲದ ಸುನಿಲ್‌ಜೋಸೆಫ್ ಹಾಗು ತಮಿಳುನಾಡು ಮೂಲದ ವಿಷ್ಣು ಜಯರಾಮ್ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಈ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ನಾರಾಯಣ ಹೆಲ್ತ್ ಸಿಟಿಯಲ್ಲಿ‌ಕೆಲಸ‌ಮಾಡುತ್ತಿದ್ದರೆಂದು ತಿಳಿದುಬಂದಿದೆ.

- Advertisement - 

ಸಿಲಿಂಡರ್ ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ವಾಟರ್ ಲೈನ್, ಕಿಟಕಿ, ಬಾಗಿಲುಗಳೆಲ್ಲ ಪೀಸ್ ಪೀಸ್ ಆಗಿವೆ. ಜೊತೆಗೆ ಸ್ಫೋಟದ ವೇಳೆ ಮನೆಯ ಗೋಡೆಗಳು ಕುಸಿದಿದ್ದು, ಮನೆ ಬಳಿಯ ವಾಹನಗಳು ಕೂಡ ಜಖಂ ಆಗಿವೆ.

ಈ ಘಟನೆಗೆ ಸಂಬಂಧಪಟ್ಟಂತೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement - 

ಬೆಳಗ್ಗೆ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು, ಬೊಮ್ಮಸಂದ್ರ ಪುರಸಭೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದಾರೆ. ಕೂಡಲೇ ಇಬ್ಬರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share This Article
error: Content is protected !!
";