ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಸವಣ್ಣನವರ ಕ್ರಾಂತಿ, ಭಗವಾನ್ ಬುದ್ಧರ ಸಮಾನತೆಯ ಶಾಂತಿ, ಅಂಬೇಡ್ಕರ್ ಅವರ ಜ್ಞಾನ ಈ ಮೂರು ವಿಷಯಗಳು ಸಮ್ಮಿಲನ ಆದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್ ಹಾಗೂ ಇಂಡೋ-ಟಿಬೆಟ್ ಸ್ನೇಹ ಸೊಸೈಟಿ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ನಾಡಿನಲ್ಲಿ ಬುದ್ದನ ಸ್ಮರಣೆ ಕಾರ್ಯಕ್ರಮದಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮ ದಿನದ ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.
ವಿಶ್ವಗುರು ಬಸವಣ್ಣ ಸಮಾಜದಲ್ಲಿ ಉತ್ತಮ ಸಂದೇಶಗಳ ಜನರಿಗೆ ಪ್ರವಚನಗಳನ್ನು ಮಾಡುವುದರ ಮೂಲಕ ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದ್ದಾರೆ. ಇಡೀ ಪ್ರಪಂಚವೇ ಕೊಂಡಾಡುವಂತ ಭಗವಾನ್ ಬುದ್ಧರವರು ಶಾಂತಿ ಮಂತ್ರ ಪಠಿಸಿದ್ದಾರೆ. ಬಾಬಾ ಸಾಹೇಬ್ ಡಾ. ಬಿಆರ್ ಅವರ ಜ್ಞಾನ ಬಲದಿಂದ ದೇಶಕ್ಕೆ ಸುಸಜ್ಜಿತ ಸಂವಿಧಾನ ಕೊಡುಗೆ ನೀಡಿದ್ದಾರೆ ಮಹನೀಯರ ತತ್ವದ ಆದರ್ಶಗಳ ಅಡಿಯಲ್ಲಿ ಉತ್ತಮ ಪ್ರಜೆಯಾಗಿ ನಾವೆಲ್ಲರೂ ಬದುಕಬೇಕೆಂದು ತಿಳಿಸಿದರು.
ದಲೈಲಾಮರವರ 90ನೇ ಹುಟ್ಟುಹಬ್ಬವನ್ನು ಚಿತ್ರದುರ್ಗ ನಾಡಿನಲ್ಲಿ ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರ. ದುರ್ಗದ ನಾಡಿಗೆ ಬೌದ್ಧ ಬಿಕ್ಕುಗಳು ಕಾಲಿಟ್ಟಿರುವುದರಿಂದ ನಾವೆಲ್ಲರೂ ಧನ್ಯರಾಗಿದ್ದೇವೆ. ಚಿತ್ರದುರ್ಗದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಾಗೋಷ್ಠಿಯನ್ನ ಬೃಹತ್ ವೇದಿಕೆಯನ್ನು ಸಿದ್ದಪಡಿಸಿ ಮುಂದಿನ ದಿನಗಳಲ್ಲಿ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹರಿಹರದ ಜಗದ್ಗುರು ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮುರುಘಾಮಠದ ಡಾ.ಬಸವಕುಮಾರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್, ಶಾಸಕ ಟಿ. ರಘುಮೂರ್ತಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಹನುಮಂತಪ್ಪ, ಮುಂಡಗೋಡಿನ ರಿನ್ಚೆನ್ ವಾನ್ಗೋ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇತರರು ಇದ್ದರು.

