ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಪುಸ್ತಕದ ವಿಷಯವಾಗದೇ, ಬದುಕಿನ ವಿಷಯವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ, ಎಸ್.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಪಾಲಿಸೋಣ ಎಂದು ಹೇಳಿದರು.
ದೇಶಕ್ಕೆ ಭದ್ರವಾದ ಅಡಿಪಾಯ ಭಾರತ ಸಂವಿಧಾನ. ಇಡೀ ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ 2038ಕ್ಕೆ ಭಾರತ ಹೊರಹೊಮ್ಮಲಿದೆ ಎಂಬುದಾಗಿ ಬ್ರಿಟೀಷ್ ಸಂಸ್ಥೆ ಹೇಳಿದ್ದು, ಇದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ಸಮಾನತೆ ಎಂದು ಹೇಳಿದರು.
ಮಾಧ್ಯಮ ಸರ್ವಸ್ಪರ್ಶಿ, ಸರ್ವ ವ್ಯಾಪ್ತಿಯಾಗಿರುವ ಒಂದು ಕಾಯಕ. ಮಾಧ್ಯಮದಲ್ಲಿ ಬರುವ ವಿಷಯಗಳನ್ನು ಎಲ್ಲರೂ ಸಮಾನ ರೀತಿಯಲ್ಲಿ ಓದುವ ಹಾಗೂ ಅರ್ಥೈಸಿಕೊಳ್ಳುವ ಕೆಲಸ ಮಾಡಲಿದ್ದಾರೆ. ಹಾಗಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುವ ಇಚ್ಛೆ ಇರುವ ಯುವ ಪತ್ರಕರ್ತರು “ಸುದ್ದಿ ಮಾಧ್ಯಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಠಿಕೋನ, ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ಪ್ರಸ್ತುತ ಪಡಿಸುತ್ತಿದ್ದರು ಎಂಬ ಘಟನಾವಳಿಗಳ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದು, ಜಿಲ್ಲೆಯ ಪತ್ರಕರ್ತರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಗಳಿಸಿ, ಕೀರ್ತಿ ತರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರು ದಿಕ್ಸೂಚಿ ಭಾಷಣ ಮಾಡಿ, ಬಾಬಾ ಸಾಹೇಬರು ಕೇವಲ ದಲಿತ ಸಮುದಾಯ ಮಾತ್ರವಲ್ಲ. ಎಲ್ಲ ವರ್ಗದ ಮಹಿಳೆಯರ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಚೇತನ. ದುಃಖಿತರ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಹೊಸ ದೇಶ, ಕನಸಿನ ಭಾರತ ದೂರದಲ್ಲೂ ಕಾಣದ ಪರಿಸ್ಥಿತಿ ಇದೆ. ಆರ್ಥಿಕ, ಸಾಮಾಜಿಕ ಸಮಾನತೆ ಇಲ್ಲದ ರಾಜಕೀಯ ಸಮಾನತೆ ಉಪಯೋಗವಿಲ್ಲ ಎಂದರು.
ಮಾಧ್ಯಮದಲ್ಲೂ ಮೇಲ್ಮಟ್ಟದಲ್ಲಿ ಸವರ್ಣೀಯರ ಸಂಖ್ಯೆ ಹೆಚ್ಚಿದೆ. ಪ್ರಮುಖ ಮಾಧ್ಯಮಗಳಲ್ಲಿ ದಲಿತ ಸಂಪಾದಕರು ಇದ್ದಾರಾ ಎಂಬುದನ್ನು ಹುಡುಕಬೇಕಿದೆ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಯುವುದಿಲ್ಲ ಎಂಬುದು ಈಗಿನ ವಾದ. ಆದರೆ, ಅಂಬೇಡ್ಕರ್ ಸಮಾಜಮುಖಿ ಹೊರತುಪಡಿಸಿ ಉಳಿದವನ್ನು ಜಾಹೀರಾತಲ್ಲೂ ಪ್ರಕಟಿಸುತ್ತಿರಲಿಲ್ಲ. ಆಗಿನ ಸಂದರ್ಭದಲ್ಲಿ ಭೀಮಾಸುರ, ದೇಶದ್ರೋಹಿ ಇತ್ಯಾದಿಯಾಗಿ ಸವರ್ಣೀಯ ಪತ್ರಿಕೆಗಳು ಅವಮಾನಿಸಿದವು. ಈಗಲೂ ದಾಸ್ಯದಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದರು.
ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳು ಸಿಗಬೇಕು. ಇಲ್ಲದಿದ್ದರೆ ದಲಿತರಿಗೆ ಪಾತಿನಿಧ್ಯಕ್ಕೆ ಅರ್ಥ ಇರುವುದಿಲ್ಲ. ದಲಿತ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪತ್ರಿಕೋದ್ಯಮದಲ್ಲಿ ಪ್ರತಿಪಾದಿಸಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ನ್ಯಾಯದ ಕುರಿತು ಮಾತನಾಡುತ್ತೇವೆ. ಆದರೆ, ಅನುμÁ್ಠನ ಪರಿಣಾಮವಾಗಿ ಆಗುತ್ತಿಲ್ಲ. ಅಂಬೇಡ್ಕರ್ ಚಿಂತನೆಯೊಂದಿಗೆ ಯುವ ಪತ್ರಕರ್ತರನ್ನು ಮತ್ತಷ್ಟು ಸಮಾಜಮುಖಿಯಾಗಿ ತೊಡಗುವಂತೆ ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸಲಿದೆ.
ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕಾಡೆಮಿಗೆ ಉತ್ತಮ ಅನುದಾನ ನೀಡಿದ್ದಾರೆ. ಹೀಗಾಗಿ ಅಕಾಡೆಮಿ ವತಿಯಿಂದ ಪತ್ರಕರ್ತರಿಗಾಗಿ, ಯುವ ಪೀಳಿಗೆಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ. ಪತ್ರಕರ್ತರು ಪ್ರಶ್ನಿಸುವ, ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಯುವ ಪತ್ರಕರ್ತರಿಗೆ ಸುದ್ದಿ ಮನೆಯ ಒಳಗೂ, ಹೊರಗೂ ಕಾರ್ಯನಿರ್ವಹಣೆ ಕುರಿತು ಹಿರಿಯರ ಮಾರ್ಗದರ್ಶನ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕರ್ನಾಟಕ ಎಸ್.ಸಿ, ಎಸ್.ಟಿ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಂ.ಸಹನಾ, ಸದಸ್ಯರಾದ ಎಂ.ಎನ್.ಅಹೋಬಳಪತಿ, ಕೆ.ನಿಂಗಜ್ಜ, ಮಂಜುನಾಥ್, ಡಾ.ಶಿವಕುಮಾರ್ ಕಣಸೋಗಿ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಸೇರಿದಂತೆ ಪತ್ರಕರ್ತರು ಇದ್ದರು.

