ಚಂದ್ರವಳ್ಳಿ ನ್ಯೂಸ್, ಚಿಕ್ಕೋಡಿ:
ಪ್ರೀತಿಸಿದ ಯುವತಿ ಪೋಷಕರ ವಿರೋಧದ ನಡುವೆ ಪ್ರಿಯಕರನ ಜೊತೆ ಓಡಿ ಹೋಗಿದ್ದರಿಂದ ಊರಿಗೆಲ್ಲ ತಿಥಿ ಊಟ ಹಾಕಿಸಿದ ಘಟನೆ ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ.
ಪೋಷಕರ ಇಚ್ಛೆಗೆ ವಿರುದ್ಧವಾಗಿ ಓಡಿಹೋದ ಮಗಳ ತಿಥಿ ಮಾಡಿದ ತಂದೆಯೊಬ್ಬ ಮಗಳು ತಮ್ಮ ಪಾಲಿಗೆ ಸತ್ತು ಹೋದಳೆಂದು ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ.
ಏನಿದು ಘಟನೆ?
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಎಂಬವರ ಮಗಳು ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಪೋಷಕರ ಸಮ್ಮತಿ ಇಲ್ಲದೆ ವಿರೋಧಿಸುತ್ತಿದ್ದರು.
ಇಂಥ ಸಂದರ್ಭದಲ್ಲೇ ಶಿವಗೌಡ ಮಗಳು ವಿಠ್ಠಲ್ ಬಸ್ತವಾಡೆ ಜತೆ ಮನೆ ಬಿಟ್ಟು ಓಡಿ ಹೋದ ಪರಿಣಾಮ ತಂದೆ ಶಿವಗೌಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.
ನಂತರ, ಮಗಳು ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವುದು ಗೊತ್ತಾಗುತ್ತದೆ. ಇದರಿಂದ ಮನನೊಂದ ಅವರು ಮಗಳು ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ತಿಥಿ ಮಾಡಿದ್ದಾರೆ.
ಶಿವಗೌಡರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಈ ಪೈಕಿ ಈಗ ಓಡಿಹೋದವಳು ಕೊನೆಯ ಮಗಳಾಗಿದ್ದಾಳೆ. ಮಗಳು ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರುವ ಶಿವಗೌಡ ಪಾಟೀಲ್, ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿಸುವ ಮೂಲಕ ಕರುಳ ಬಳ್ಳಿ ಸಂಬಂಧ ಕತ್ತರಿಸಿಕೊಂಡು ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಸಿ ತಿಥಿ ಊಟ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ಮಗಳ ಫೋಟೊ ಹಾಕಿ ಊರ ತುಂಬ ಶ್ರದ್ಧಾಂಜಲಿ ಬ್ಯಾನರ್ಗಳನ್ನೂ ಹಾಕಿಸಿದ್ದಾರೆ.

