ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ವಿನಾಶ ಕಾಲೇ ವಿಪರೀತ ಬುದ್ಧಿ” ರೌಡಿ ಕೊತ್ವಾಲನ ಶಿಷ್ಯ ಡಿಕೆಶಿ ನಡೆದು ಬಂದ ದಾರಿ, ಬೆಳೆದು ಬಂದ ಪರಿಸರ, ಜೊತೆಗಿದ್ದವರ ಸಹವಾಸವೇ ಅಂತಹದ್ದು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಮಿಸ್ಟರ್ ಡಿ.ಕೆ.ಶಿವಕುಮಾರ್, ನಿಮ್ಮ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿತ್ತು. ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಭಾಗವಹಿಸಲಿಲ್ಲ ಎಂದು ಕನ್ನಡದ ನಟರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಬೆದರಿಕೆ ಹಾಕಿರುವುದು ಹೇಡಿತನ ಮತ್ತು ಖಂಡನೀಯ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.
ಡಿಸಿಎಂ ಈ ಗೊಡ್ಡು ಬೆದರಿಕೆ ನಿಮ್ಮ ಹತಾಶೆ ಮತ್ತು ನೀವು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದನ್ನು ತೋರಿಸುತ್ತಿದೆ. ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಕಲಾವಿದರು ಯಾವುದೇ ಪಕ್ಷದ ಕಾಲಾಳುಗಳಲ್ಲ. ಅವರು ಯಾರನ್ನು , ಯಾವ ಪಕ್ಷವನ್ನು ಬೆಂಬಲಿಸಬೇಕು? ಎನ್ನುವುದು ಅವರ ವಯಕ್ತಿಕ ತೀರ್ಮಾನ ಎಂದು ಜೆಡಿಎಸ್ ಹೇಳಿದೆ.
ನಮ್ಮದು ಪ್ರಜಾಪ್ರಭುತ್ವ, ಸಂವಿಧಾನದ ಅಡಿಯಲ್ಲಿ ನೀವು ಡಿಸಿಎಂ ಆಗಿದ್ದೀರಿ. ರೌಡಿಸಂ, ಧಮ್ಕಿ ರಾಜಕೀಯ ಯಾರಿಗೂ ಶೋಭೆ ತರುವುದಿಲ್ಲ. ಕನಕಪುರವನ್ನು ರಿಪಬ್ಲಿಕ್ ಮಾಡಿಕೊಂಡು ದರ್ಪ, ದೌರ್ಜನ್ಯ, ಬೆದರಿಕೆ ಹಾಕಿ ಜನರನ್ಮು ಹಿಂಸಿಸುತ್ತಾ, ಬಂಡೆಗಳನ್ನು ಖಾಲಿ ಮಾಡಿರುವ ಅಪೂರ್ವ ಸಹೋದರರಿಗೆ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಹಾಗೂಬೆಂ.ಗ್ರಾಮಾಂತರದಲ್ಲಿ ನಿಮ್ಮ ಸಹೋದರನಿಗೆ ನಟ್ಟು, ಬೋಲ್ಟು ಸರಿಮಾಡಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಇನ್ನೂ ಸಿಎಂ ಕುರ್ಚಿಗೆ ಏರಲು ತಿರುಕನ ಕನಸು ಕಾಣುತ್ತಾ ಅಡ್ಡದಾರಿ, ತಂತ್ರ ಕುತಂತ್ರ ವಾಮಮಾರ್ಗದಲ್ಲಿ ಸಾಗಿರುವ ನಿನಗೆ ಕಾಂಗ್ರೆಸ್ ಪಾರ್ಟಿಯವರೇ ನಟ್ಟು, ಬೋಲ್ಟು ಟೈಟು ಮಾಡುತ್ತಿದ್ದಾರೆ ಅಷ್ಟು ಸಾಲದೇ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

