ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರಾವಳಿಯ ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರತ್ಯೇಕವಾದ ನೀತಿ ಜಾರಿಗೊಳಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಹೊಸಕೆರೆಹಳ್ಳಿಯ ನಂದಿ ಲಿಂಕ್ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನವು ಆಯೋಜಿಸಿದ್ದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಪಾಲ್ಗೊಂಡು, ಮಾತನಾಡಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಎಂದರು.
ಕುಂದಾಪುರದ ಸಾಹಿತ್ಯ, ಕಲೆ, ಸಂಸ್ಕೃತಿ, ಐಕ್ಯತೆಯನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ನಾನು ಅನೇಕ ಬಾರಿ ಹೇಳುತ್ತಿರುತ್ತೇನೆ – ನಿಮ್ಮ ಬೇರನ್ನು ಮರೆತರೆ, ಫಲ ಸಿಗುವುದಿಲ್ಲ. ಹಾಗಾಗಿ ನಮ್ಮ ಮೂಲವನ್ನು ಯಾವತ್ತೂ ಮರೆಯಬಾರದು. ಕುಂದಾಪುರದ ನೆಲ, ಭಾಷೆ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಕುಂದಾಪ್ರ ಕನ್ನಡ ಹಬ್ಬದ ಮೂಲಕ ನಡೆಯುತ್ತಿದೆ ಎಂದು ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಐದು ನಗರಪಾಲಿಕೆಗಳಾಗಿ ವಿಂಗಡಿಸಿದಾಗ ಕನ್ನಡಿಗರ ಭೂಮಿಯ ಭಾಗವಾಗುತ್ತಿದೆ, ಅವರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಹಲವರು ಟೀಕೆ ಮಾಡಿದರು.
ಬೆಂಗಳೂರು ಕರ್ನಾಟಕದ ಎಲ್ಲಾ ಜನತೆಯ ಹೃದಯಭಾಗವಿದ್ದಂತೆ. ಯಾರಿಗೂ ತಾವು ಪರವೂರಿನವರು ಎಂಬ ಭಾವನೆ ಬೇಡ. ಇದು ನಿಮ್ಮೆಲ್ಲರ ರಾಜ್ಯ; ಬೆಂಗಳೂರು ರಾಜ್ಯದ ಕೇಂದ್ರ ಸ್ಥಳವಾಗಿದೆ. ಬೆಂಗಳೂರು ಎಲ್ಲರನ್ನೂ ಒಳಗೊಳ್ಳುತ್ತದೆ. ಯಾರೇ ಬೆಂಗಳೂರಿಗೆ ಬಂದರೂ ವಾಪಾಸ್ಸು ಅವರ ಊರಿಗೆ ಮರಳಿ ಹೋಗುವ ಮನಸ್ಸು ಮಾಡುವುದಿಲ್ಲ.
340 ಕಿ.ಮೀ.ನಷ್ಟು ವ್ಯಾಪಿಸಿರುವ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಘೋಷಣೆ ಮಾಡಿದ್ದೇವೆ. ಅದು ಜಾರಿಗೆ ಬಂದ ನಂತರ, ವಿಮಾನ ನಿಲ್ದಾಣದ ಸ್ಥಾಪನೆ ಬಗ್ಗೆ ಚರ್ಚಿಸಲಾಗುವುದು. ಕರಾವಳಿ ಪ್ರದೇಶದಿಂದ ಜನರು ವಲಸೆ ಹೋಗುವುದನ್ನು ತಡೆಯಲು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ. ಇಲ್ಲಿನ ಪರಂಪರೆ, ಇತಿಹಾಸವನ್ನು ದೇಶಕ್ಕೆ ಪರಿಚಯಿಸಬೇಕು. ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಡಿಸಿಎಂ ಕರೆ ನೀಡಿದರು.
ನಾನು ಕುಂದಾಪುರ, ಉಡುಪಿ, ಕರಾವಳಿ ಭಾಗದ ಜನರ ಜೊತೆಗಿದ್ದೇನೆ. ಇದೇ ಕಾರಣಕ್ಕೆ ನಾನು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಕರಾವಳಿಯು ಮುಂಚೂಣಿಯಲ್ಲಿದೆ. ಬುದ್ಧಿವಂತಿಕೆ ಹಾಗೂ ಪ್ರಜ್ಞಾವಂತಿಕೆ ಹೆಚ್ಚಿದೆ. ಇಲ್ಲಿನ ಕಲಾಪ್ರಕಾರಗಳು, ಸಂಸ್ಕೃತಿ ಚಿರಕಾಲ ಉಳಿಯಬೇಕು. ಈ ನಿಟ್ಟಿನಲ್ಲಿ ನೀವಿಟ್ಟ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಭರವಸೆ ನೀಡಿದರು.

