ಪ್ರಜಾಪ್ರಭುತ್ವದ ಕಾವಲು ಕಾಯುವವರೇ ಪತ್ರಕರ್ತರು:ಸಭಾಧ್ಯಕ್ಷ ಯು.ಟಿ ಖಾದರ್

News Desk

ಚಂದ್ರವಳ್ಳಿ ನ್ಯೂಸ್, ಗೋವಾ:
ಫೇಬ್ರವರಿ 14ರಂದು ಅವರು ಗೋವಾ ರಾಜ್ಯದ ಕೋಲ್ವಾದಲ್ಲಿನ ಕೋಲ್ಮಾರ್ ಬೀಚ್ ರೆಸಾರ್ಟೀನ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಜರ್ನಲೀಸ್ಟ್ ಯೂನಿಯನ್ ಇದರ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೀಟಿಂಗ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ –2025 ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಪ್ರಜಾಪ್ರಭುತ್ವದ ಕಾವಲು ಕಾಯುವವರೇ ಪತ್ರಕರ್ತರು. ನಿಮ್ಮ ಕೆಲಸದಲ್ಲಿ ಏರಿಳಿತ ಇರಬಹುದು. ದೇಶದಲ್ಲಿ ಇವತ್ತು ಸಂವಿಧಾನದ ತತ್ವವನ್ನು ರಕ್ಷಣೆ ಮಾಡಿಕೊಂಡು ಬಂದಿದ್ದೀರಿ. ಸಂಪೂರ್ಣವಾಗಿ ಸಾರ್ವಜನಿಕ ಸೇವೆಯಲ್ಲಿ ತೂಡಗಿಸಿಕೊಂಡ ಕ್ಷೇತ್ರ ಯಾವುದಾದರು ಇದ್ದರೆ ಅದು ಪತ್ರಿಕಾ ರಂಗ ಎಂದು ಹೇಳಿದರು.

ಪತ್ರಿಕಾ ರಂಗ ಮತ್ತು ರಾಜಕಾರಣ ಇವೆರೆಡರ ಮೇಲೆ ಸಾಮನ್ಯ ಪ್ರಜೆಗಳು ಬಹಳಷ್ಟು ವಿಶ್ವಾಸ ಮತ್ತು ನಿರೀಕ್ಷೆ ಎರಡನ್ನೂ ಇಟ್ಟಿದ್ದಾರೆ. ನಾವು ಈ ನೆಲದ ಹಿತ ದೃಷ್ಟಿಯಿಂದ ಒಂದಾಗಿ ಸಾಗಿದಲ್ಲಿ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಹೇಳಿದರು.

ಮಾಧ್ಯಮ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರ ನಡುವೆಯೂ ಅನೇಕ ಮಾಧ್ಯಮಗಳು ವೃತ್ತಿಪರತೆ ಮರೆಯದೇ ಸಾಗುತ್ತಿರೋದು ಪ್ರಶಂಸಾರ್ಹ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗುತ್ತಿರಬೇಕು. ದೇಶದ ವಿವಿಧ ರಾಜ್ಯಗಳಿಂದ ಬಂದ ನಿಮಗೆಲ್ಲ ಶುಭ ಹಾರೈಕೆಗಳು ಎಂದು ಹೇಳಿದ ಖಾದರ್ ನಿಮಗೆ ಸರ್ಕಾರದಿಂದ ಹೆಚ್ಚಿನ ಸಹಕಾರ ಸಿಗಬೇಕು. ಈ ವಿಚಾರದಲ್ಲಿ ನಾನು ಗಮನ ಹರಿಸುತ್ತೇನೆ ಎಂದು ಭರವಸೆ ನೀಡಿದರು.

ಇಳಕಲ್ ಮಠದ ಶ್ರೀ ಮಹಾಂತೇಶ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಇಂಡಿಯನ್ ಜರ್ನಲೀಸ್ಟ್ ಯೂನಿಯನ್ ಅಧ್ಯಕ್ಷ ಕೆ ಪಿ ಪಂಡಿತ್, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಶಿವಪೂಜಿ, ಉಪಾಧ್ಯಕ್ಷ ಸುದೇಶ್ ಕುಮಾರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

 ಬಾಕ್ಸ್-ರಾಷ್ಟ್ರೀಯ ಸಭೆಯಲ್ಲಿ ಬೇರೆ ಬೇರೆ ರಾಜ್ಯದ ಅಧ್ಯಕ್ಷರುಗಳು ಪತ್ರಿಕಾ ರಂಗದ ಸವಾಲುಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು. ಸುಮಾರು 20 ರಾಜ್ಯಗಳಿಂದ ಬಂದ 250 ಪತ್ರಕರ್ತರು ಮಧ್ಯಾಹ್ನದ ನಂತರ ಪ್ರಿಂಟ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾ ಎಂಬ ವಿಷಯದ ಬಗ್ಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ನುರಿತ ಸಿನಿಯರ್ ಜರ್ನಲಿಸ್ಟ್ ಗಳ ಅನುಭವದ ಮಾತುಗಳೊಂದಿಗೆ ಆ ದಿನದ ವಿಚಾರ ದಾರೆಗೆ ಪೂರ್ಣ ವಿರಾಮ ನೀಡಲಾಯಿತು.

ಈ ಸಂದರ್ಭದಲ್ಲಿ ವೈದ್ಯಕೀಯ (ಕಣ್ಣಿನ)ಕ್ಷೇತ್ರದಲ್ಲಿ  ಸಾಧನೆ ಮಾಡಿರುವ ಹಿರಿಯ ವೈದ್ಯ ಡಾ.ಸುಬ್ಬಣ್ಣ  ಶೆಟ್ಟಿ(81)ಅವರಿಗೆ IJU ನ್ಯಾಷನಲ್ ಅಚೀವ್ ಮೆಂಟ್ –2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.  ಪ್ರಿಯಾ ಸುದೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಅದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಅಂಕಲಿ ಮಠದ ಸ್ವಾಮೀಜಿ, ಗೋವಾ ಕನ್ನಡ ಸಂಘದ ಅಧ್ಯಕ್ಷ ಬಸವರಾಜ್ ಮೇಟಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತರನ್ನು ಗೌರವಿಸಲಾಯಿತು.

 

 

Share This Article
error: Content is protected !!
";