ಚಂದ್ರವಳ್ಳಿ ನ್ಯೂಸ್, ಮೈಸೂರು:
ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಇಂದು ಬೆಳ್ಳಗ್ಗೆ ಭೇಟಿ ನೀಡಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ದೇವಾಲಯದ ಆಡಳಿತ ಮಂಡಳಿ ಮತ್ತು ತಾಲ್ಲೂಕು ಆಡಳಿತ ಸದಸ್ಯರು ಹೆಚ್.ಡಿ ದೇವೇಗೌಡ ಅವರಿಗೆ ಸ್ವಾಗತ ಕೋರಿದರು. ಅಲ್ಲದೆ ನಾದಸ್ವರ ನುಡಿಸಿ ಹಾಗೂ ಹೂಗುಚ್ಛ ನೀಡಿ ಸ್ವಾಗತಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ದಕ್ಷಿಣ ಭಾರತದಲ್ಲಿಯೇ ನಂಜುಂಡೇಶ್ವರ ದೇವಾಲಯ ಅತ್ಯಂತ ಪುರಾತನ ಕಾಲದ್ದು, ದೇಶಾದ್ಯಂತ ಸಾಕಷ್ಟು ಭಕ್ತ ಸಮೂಹ ನಂಜುಂಡೇಶ್ವರನ ಸನ್ನಿಧಿಗೆ ಆಗಮಿಸುತ್ತದೆ. ಇಲ್ಲಿ ಅಭಿವೃದ್ಧಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ. ನಿರ್ವಹಣೆಯ ವ್ಯವಸ್ಥೆ ಇಲ್ಲದೆ ದೇವಾಲಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ದೇವಾಲಯದ ಸನ್ನಿಧಿಯಲ್ಲಿ ರಾಜಕೀಯ ಮಾತನಾಡಬಾರದು. ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಹಿನ್ನೆಲೆ ನಂಜುಂಡೇಶ್ವರನ ಸನ್ನಿಧಿಗೆ ಭೇಟಿ ನೀಡಿ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಜೊತೆಗೂಡಿ ನಂಜುಂಡೇಶ್ವರನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಗಣಪತಿ, ಪಾರ್ವತಿ ಅಮ್ಮ ಮತ್ತು ಕಾಲಭೈರವೇಶ್ವರನ ದರ್ಶನ ಪಡೆದು ಪುನೀತರಾನಾಗಿದ್ದೇನೆ ಎಂದು ಗೌಡರು ತಿಳಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿಯ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಮೈಸೂರಿನತ್ತ ತೆರಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಅನ್ನದಾನಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಜೆಡಿಎಸ್ ಪಕ್ಷದ ಮುಖಂಡರಾದ ನರಸಿಂಹ ಮೂರ್ತಿ, ಮಹದೇವಸ್ವಾಮಿ, ಸಂಜಯ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.