ಐಐಟಿ ತರುವ ದೇವೇಗೌಡರ ಆಸೆ ಭಗವಂತ ಈಡೇರಿಸುತ್ತಾನೆ-ಹೆಚ್ ಡಿಕೆ

News Desk

ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನಕ್ಕೆ ಕಳೆದ 20 ವರ್ಷದಿಂದ ಐಐಟಿ ತರಲು ದೇವೇಗೌಡರು ಹೋರಾಟ ಮಾಡುತ್ತಿದ್ದು
, ಅವರ ಆಸೆಯನ್ನು ಭಗವಂತ ಈಡೇರಿಸುತ್ತಾನೆ. ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಸದ್ಯದಲ್ಲೇ ವೇಗ ಪಡೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ನಗರದ ಹೊರವಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ವಿಮಾನ ನಿಲ್ದಾಣದ ಬಗ್ಗೆ ಎಲ್ಲವನ್ನೂ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಅಧಿಕಾರಿಗಳು ಸಹಕಾರ ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ವಿಮಾನ ನಿಲ್ದಾಣದ ಕಾಮಗಾರಿ ವೇಗ ದೊಡ್ಡಮಟ್ಟದಲ್ಲಿ ನಡೆಯುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಜೆಡಿಎಸ್ ಪಕ್ಷ ಸಂಘಟನೆ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ನಾನೇ ಖುದ್ದು ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ. ಸದ್ಯ ಸಂಘಟನೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಅಧ್ಯಕ್ಷರೇ ವಹಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವನಾದ ಬಳಿಕ ನನಗೆ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ದೇವೇಗೌಡರೇ ಪಕ್ಷದ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಜೊತೆಗೂಡಿ ಸಂಘಟನೆಗೆ ತೀರ್ಮಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಚರನೆ ಮಾಡುತ್ತೇನೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ, ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ? ಅಭಿವೃದ್ಧಿ ಮಾಡಿರುವವನು ಇಲ್ಲಿದ್ದೀನಿ. ನಾನು ರಾಮನಗರಕ್ಕೆ ಹೋಗುವ ಮುಂಚೆ ಹೇಗಿತ್ತು? ಕನಕಪುರ ಹೇಗಿತ್ತು? ಇವತ್ತು ಯಾವ ಮಟ್ಟಕ್ಕೆ ಬೆಳೆದಿದೆ, ಕಾರಣ ಯಾರು? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಡಿಕೆ ಶಿವಕುಮಾರ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಸಾಕ್ಷಿ ಗುಡ್ಡೆ ಕೇಳ್ತಾರೆ, ನಾನಂತೂ ದೊಡ್ಡಮಟ್ಟದ ಸಾಕ್ಷಿ ಗುಡ್ಡೆ ಇಟ್ಟುಕೊಂಡಿಲ್ಲ. ಕಷ್ಟಪಟ್ಟು 45 ಎಕರೆ ಖರೀದಿ ಮಾಡಿದ್ದೆ ಅದನ್ನು ಬಿಡ್ತಿಲ್ಲ. ಅದನ್ನು ಲಪಟಾಯಿಸಲು ಮುಂದಾಗಿದ್ದಾರೆ. ಇಲ್ಲಿಯವರ ಕೈಯಲ್ಲಿ ಆಗಲ್ಲ. ನಿನ್ನೆ ನನಗೆ ನೋಟಿಸ್ ಕೊಡದೇ ದಾಳಿ ಮಾಡಲು ಬಂದಿದ್ದರು. ನನ್ನ ಭೂಮಿ ಸರ್ವೇ ಮಾಡುವುದಾದರೆ ನೋಟಿಸ್ ಕೊಡಿ. ಅಂತಾರಾಷ್ಟ್ರೀಯ ಸರ್ವೇಯರ್ ಕರೆದುಕೊಂಡು ಬನ್ನಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಜಮೀನು ಒತ್ತುವರಿ ಕುರಿತು ತನಿಖೆ ಮಾಡಲು ಎಸ್​ಐಟಿ ಬರಲಿ. ನಾನೇನು ತನಿಖೆ ಮಾಡಬೇಡಿ ಅಂತ ಹೇಳ್ತಿಲ್ಲ. ಯಾವುದಾದರೂ ಕಾನೂನು ಬಾಹಿರವಾಗಿದ್ದರೆ ಬೆಳಿಗ್ಗೆನೇ ತೆಗೆದುಕೊಂಡು ಹೋಗಿ. ನನ್ನದು ಯಾವ ತಕರಾರಿಲ್ಲ, ಕಾನೂನಿನ ಪ್ರಕಾರ ಮಾಡಿ ಎಂದು ಕುಮಾರಸ್ವಾಮಿ ತಿಳಿಸಿದರು.

ಮೈಸೂರು ಗಲಭೆ ಸೇರಿದಂತೆ ಇತರೆ ಗಲಭೆಗಳು ರಾಜಕಾರಣಕ್ಕೋಸ್ಕರ ನಡೆಯುತ್ತಿದೆ. 1 ಲಕ್ಷದ 89 ಸಾವಿರ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆಗಿಂತ ಕಲೆಕ್ಷನ್ ಕಡಿಮೆಯಾಗುತ್ತಿದೆ. ಒಂದು ಕಡೆ ಸಾಲ. ಇದನ್ನು ಹೇಗೆ ಸರಿಪಡಿಸಿಕೊಳ್ಳುತ್ತೀರಾ ಅದನ್ನು ನೋಡಿ. ಆಮೇಲೆ ಕಲ್ಲು ಹೊಡ್ಸೋದೊ, ಬೆಂಕಿ ಹಚ್ಚೋದು ನಿಧಾನಕ್ಕೆ ಮಾಡಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

 

 

Share This Article
error: Content is protected !!
";