ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ಪರಿಕಲ್ಪನೆಯ ಫಲವಾಗಿ ರೂಪುಗೊಂಡಿರುವ ‘ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಕಾಯ್ದೆ, 2025′ ನಮ್ಮ ಹಳ್ಳಿಗಳ ವಿಕಾಸ ಮತ್ತು ಸಮೃದ್ಧಿಯ ಹೊಸ ಅಧ್ಯಾಯ ಬರೆಯಲು ತರಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಗ್ರಾಮೀಣ ಬದುಕಿಗೆ ಹೆಚ್ಚಿನ ಭರವಸೆ ನೀಡಲಾಗಿದೆ. ಕೃಷಿ ಚಟುವಟಿಕೆಗಳ ಸಮಯದಲ್ಲಿ ಕೆಲಸಕ್ಕೆ ವಿರಾಮ ನೀಡುವ ಮೂಲಕ ರೈತರ ಹಿತರಕ್ಷಣೆ ಜೊತೆಗೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕಲಾಗಿದೆ. ಇದೊಂದು ಯೋಜನೆ ಮಾತ್ರವಲ್ಲ, ನಮ್ಮ ಗ್ರಾಮಗಳ ಸ್ವಾವಲಂಬನೆಯ ದೃಢಸಂಕಲ್ಪ! ಎಂದು ಅವರು ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಈ ಕಾಯ್ದೆಯು ಪಾರದರ್ಶಕತೆ, ಡಿಜಿಟಲ್ ಪಾವತಿ ಮತ್ತು ಸ್ಥಳೀಯ, ಗ್ರಾಮ ಮಟ್ಟದ ನಿರ್ಣಯಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ, ನಮ್ಮ ಗ್ರಾಮೀಣ ಶ್ರಮಿಕ, ಕಾರ್ಮಿಕರಿಗೆ ಘನತೆಯ ಬದುಕನ್ನು ಕಲ್ಪಿಸುತ್ತದೆ. ಟೊಳ್ಳು ಕಲ್ಯಾಣ ಕಾರ್ಯಕ್ರಮಗಳಿಂದ ವಿಕಸಿತ ಭಾರತದತ್ತ ದಾಪುಗಾಲಿಟ್ಟು ಮುನ್ನಡೆಯುತ್ತಿರುವ ಭಾರತದ ಆಶೋತ್ತರಗಳನ್ನು ತಲುಪುವುದು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ, ಶಾಶ್ವತ ಆಸ್ತಿಗಳ ನಿರ್ಮಾಣ ಮತ್ತು ರೈತಸ್ನೇಹಿ ಪರಿವರ್ತನೆಗಳ ಮೂಲಕ ‘ವಿಕಸಿತ ಭಾರತ‘ದ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

