ಚಂದ್ರವಳ್ಳಿ ನ್ಯೂಸ್, ಆನೇಕಲ್:
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಜೈಲಿಗೆ ಬಂದಿಖಾನೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಂದಿಖಾನೆ ಡಿಜಿಪಿಯಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನ ಚೆಕ್ ಪೋಸ್ಟ್ ಬಳಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಧಿಕಾರಿಗಳ ಜೊತೆ ಸೆಂಟ್ರಲ್ ಜೈಲಿನ ಸುತ್ತಮುತ್ತ ಓಡಾಡಿ ಪರಿಶೀಲನೆ ನಡೆಸಿದ್ದಲ್ಲದೆ ಪ್ರತಿ ಬ್ಯಾರಕ್ಗೂ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಹಿತಿ ಕಲೆಹಾಕಿದ್ದಾರೆ.
ಕಳ್ಳಾಟ ಆಡಿದ್ರೆ ಕಠಿಣ ಕ್ರಮ:
ಜೈಲಿನ ಪ್ರತಿ ಬ್ಯಾರಕ್ ಭೇಟಿ ಮಾಹಿತಿ ಸಂಗ್ರಹ ಮಾಡಿದ ನಂತರ ಅಲೋಕ್ ಕುಮಾರ್ ಅವರು, ಕೈದಿಗಳ ಬಳಿ ತೆರಳಿ ಊಟ, ತಿಂಡಿ, ಶೌಚಾಲಯ ವ್ಯವಸ್ಥೆ ಕುರಿತು ಕೈದಿಗಳಿಗೆ ಡಿಜಿಪಿ ಪ್ರಶ್ನೆ ಕೇಳಿದರು. ಇದೇ ಸಂದರ್ಭದಲ್ಲಿ ಕೈದಿಗಳು ಮರೆಮಾಚಿ ಮೊಬೈಲ್ ಬಳಕೆ ಮಾಡುತ್ತಿದ್ರೆ ಸಿಬ್ಬಂದಿ ವಶಕ್ಕೆ ನೀಡುವಂತೆ ತಾಕೀತು ಮಾಡಿದ್ದಾರೆ.
ಈ ವಿಚಾರದಲ್ಲಿ ಕಳ್ಳಾಟ ಆಡಿದ್ರೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎಂದು ಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸೆಂಟ್ರಲ್ ಜೈಲಲ್ಲಿ ಇನ್ಮುಂದೆ ಗಾಂಜಾ, ಬಿಡಿ, ಸಿಗರೇಟ್ ಯಾವುದು ಸಿಗಲ್ಲ. ಎಲ್ಲಾ ಬಂದ್ ಆಗಬೇಕು ಎಂದು ಜೈಲು ಅಧಿಕಾರಿಗಳಿಗೂ ಡಿಜಿಪಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಿಂಚಿನ ಸಂಚಾರ ನಡೆಸಿ ಅಡುಗೆ ಮನೆ, ಆಸ್ಪತ್ರೆಗೂ ವಿಸಿಟ್ ಮಾಡಿ ಮಾಹಿತಿ ಪಡೆದಿದ್ದಾರೆ.
ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ನೇರವಾಗಿ ಎಚ್ಚರಿಸಿದ್ದಾರೆ. ಅಡುಗೆ ಮನೆಯ ಸಿಬ್ಬಂದಿಗೂ ಎಚ್ಚರಿಸಿರುವ ಅವರು, ಎಡಿಷನಲ್ ಆ್ಯಕ್ಟಿವಿಟಿಗಳು ಬಂದ್ ಆಗಬೇಕು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಜೈಲಿನ ಬೇಕರಿಗೂ ಡಿಜಿಪಿ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್, ಇಲ್ಲಿ ವೈನ್ ತಯಾರಿಸಿದ್ರೆ ವೈಲೆಂಟ್ ಆಗಬೇಕಾಗುತ್ತೆ ಎಂದು ಡಿಜಿಪಿ ಅಲೋಕ್ ಕುಮಾರ್ ಗರಂ ಆದ ಪ್ರಸಂಗ ಕೂಡ ನಡೆಯಿತು.
ಪೊಲೀಸರಿಗೆ ತರಾಟೆ:
ಪಾರ್ಕಿಂಗ್ ಅವ್ಯವಸ್ಥೆ ಬಗ್ಗೆ ಪೊಲೀಸ್ ಸಿಬ್ಬಂದಿಯನ್ನ ಇದೇ ವೇಳೆ ಡಿಜಿಪಿ ಅಲೋಕ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಜಾಗವಿದ್ರೂ ಯಾಕೆ ಸಮರ್ಪಕವಾಗಿ ಅದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ? ಜಾಗ ಸ್ವಚ್ಛ ಮಾಡಿ ವಾಹನಗಳ ಪಾರ್ಕಿಂಗ್ಗೆ ಸರಿಯಾಗಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಸುಮಾರು 50ಕ್ಕೂ ಅಧಿಕ ಅಧಿಕಾರಿಗಳ ಜೊತೆ ಅವರು ಜೈಲ್ ರೌಂಡ್ಸ್ ನಡೆಸಿದ್ದು, ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷಕ ಅಂಶುಕುಮಾರ್, ಕಮಾಂಡರ್ ವೀರೇಶ್ ಕುಮಾರ್, ಸಹಾಯಕ ಕಮಾಂಡರ್ ಮಾದೇಶ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

