ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಳಗೋಟೆಯಲ್ಲಿರುವ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿರುವ ಶ್ರೀರಾಮನ ದೇವಾಲಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯನಿಗೆ ಮಲ್ಲಿಗೆ, ಸುಗಂಧರಾಜ, ಕನಕಾಂಬರ, ಸೇವಂತಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಬೆಳಗಿನಿಂದ ಮಧ್ಯಾಹ್ನದವರೆಗೆ ನೂರಾರು ಭಕ್ತರು ಧಾವಿಸಿ ಶ್ರೀರಾಮನ ದರ್ಶನ ಪಡೆದರು.
ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗೋಪಾಲ್ರಾವ್ ಜಾಧವ್, ಉಷಬಾಯಿ, ವಿದ್ಯಾನಂದಲಾಡ್, ಸುಚಿತ್ರಲಾಡ್, ಮಂಜುನಾಥ ಗಾಯಕ್ವಾಡ್, ಕೃಷ್ಣೋಜಿರಾವ್ ಮೋರೆ, ಚಂದ್ರೋಜಿರಾವ್, ಗುರುರಾಜ ಫರ್ನಿಚರ್ಸ್ ಮಾಲೀಕರಾದ ಕಾಶಿವಿಶ್ವನಾಥಶೆಟ್ಟಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಸೇರಿದಂತೆ ಇನ್ನು ಅನೇಕರು ಶ್ರೀರಾಮನವಮಿಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರಿಗೆ ಕೋಸಂಬರಿ ಪಾನಕ ವಿತರಿಸಲಾಯಿತು.
ಸ್ಟೇಡಿಯಂ ರಸ್ತೆ, ರಂಗಯ್ಯನಬಾಗಿಲು, ಆನೆಬಾಗಿಲು ಹಾಗೂ ಬುರುಜನಹಟ್ಟಿಯಲ್ಲಿರುವ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹಾಗೂ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

