ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತ ಜನಗಣತಿ-2027ರ ಅಂಗವಾಗಿ ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ “ಸ್ವಯಂ ಗಣತಿ” ಪ್ರಕ್ರಿಯೆಯು 2026ರ ಏಪ್ರಿಲ್ 1 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಸಾರ್ವಜನಿಕರು 2026ರ ಏಪ್ರಿಲ್ 01 ರಿಂದ 15 ರವರೆಗೆ ಇಲಾಖೆಯ ವೆಬ್ಸೈಟ್ www.se.census.gov.in ಗೆ ಭೇಟಿ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಬಹುದು. ಮಾಹಿತಿ ಸಲ್ಲಿಸಿದ ನಂತರ ಲಭ್ಯವಾಗುವ ರೆಫರೆನ್ಸ್ ಐಡಿ ಅನ್ನು ಸಾರ್ವಜನಿಕರು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಬಳಿಕ 2026ರ ಏಪ್ರಿಲ್ 16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಯ ಸಮಯದಲ್ಲಿ, ಮೌಲ್ಯೀಕರಣಕ್ಕಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಈ ರೆಫರೆನ್ಸ್ ಐಡಿ ಅನ್ನು ನೀಡಿ ಗಣತಿ ಕಾರ್ಯದಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದ್ದಾರೆ.

