ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋಗಿಲು ಕ್ರಾಸ್ನಲ್ಲಿರುವ ಅಕ್ರಮ ವಸತಿಗಳ ತೆರವುಗೊಳಿಸಿರುವುದರ ಕುರಿತು ವಾಸ್ತವ ಅರ್ಥಮಾಡಿಕೊಳ್ಳದೆ ಟೀಕಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ಅಧಿಕಾರಿಗಳು ಕಾನೂನಾತ್ಮಕವಾಗಿ ಮಾಡಬೇಕಿರುವ ಕೆಲಸ ಮಾಡಿದ್ದಾರೆ. ಹಿರಿಯ ನಾಯಕರಾದ ಪಿಣರಾಯಿ ವಿಜಯನ್ ವಾಸ್ತವ ಅರ್ಥಮಾಡಿಕೊಳ್ಳದೆ ಮಾತನಾಡಿರುವುದು ದುರಾದೃಷ್ಟಕರ.
ತ್ಯಾಜ್ಯ ಡಂಪ್ ಮಾಡಲು 9 ವರ್ಷಗಳ ಹಿಂದೆಯೇ ನೋಟಿಫೈ ಮಾಡಿ, ನಿಗದಿಯಾಗಿದ್ದ ಸ್ಥಳದಲ್ಲಿ ಕೆಲ ಸ್ಥಳೀಯರು, ಇನ್ನೂ ಕೆಲವರು ಬೇರೆಡೆಯಿಂದ ಬಂದವರು ಅಕ್ರಮವಾಗಿ ವಸತಿ ಪ್ರದೇಶಗಳನ್ನು ನಿರ್ಮಿಸಿಕೊಂಡಿದ್ದರು ಎಂದು ಡಿಸಿಎಂ ತಿಳಿಸಿದ್ದಾರೆ.
ತ್ಯಾಜ್ಯ ಡಂಪ್ ಮಾಡುವ ಸ್ಥಳದಲ್ಲಿ ನೆಲೆಸುವುದರಿಂದ ಆರೋಗ್ಯ ಸಮಸ್ಯೆ ಮತ್ತು ಅಪಾಯಗಳಿರುವುದರಿಂದ ವಸತಿ ಪ್ರದೇಶಗಳನ್ನು ತೆರವುಗೊಳಿಸಲಾಗಿದೆ. ಇಂಥಹ ವಿಚಾರಗಳಲ್ಲಿ ಪಿಣರಾಯಿ ವಿಜಯನ್ ಅವರಂಥಹ ಹಿರಿಯ ನಾಯಕರು ವಾಸ್ತವ ಅರಿಯದೆ ಮಾತನಾಡಬಾರದು ಎಂದು ಡಿಸಿಎಂ ತಾಕೀತು ಮಾಡಿದ್ದಾರೆ.
ಬೆಂಗಳೂರಿನ ಬಗ್ಗೆ ನಮಗೆ ಅರಿವಿದೆ, ಈ ರೀತಿಯ ಭೂ ಮಾಫಿಯಾವನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ಸೂಕ್ತ ದಾಖಲೆಗಳನ್ನು ಹೊಂದಿರುವ ಅರ್ಹರಿಗೆ ಬೇರೆ ಮನೆಗಳನ್ನು ನಾವು ನೀಡಲಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಪಿಣರಾಯಿ ವಿಜಯನ್ ಅವರು ವಾಸ್ತವ ಅರಿತು ಮಾತನಾಡಬೇಕು. ನಾವು ಯಾವುದೇ ರೀತಿಯ ಬುಲ್ಡೋಜರ್ ಕಾರ್ಯಾಚರಣೆ ಮಾಡಿಲ್ಲ. ಬೆಂಗಳೂರು ನಗರ ಮುಂಬೈ ಮತ್ತಿತರ ನಗರಗಳಂತಲ್ಲ, ಇಲ್ಲಿ ಹೆಚ್ಚು ಸ್ಲಂಗಳಿಲ್ಲ ಹಾಗೂ ನಾವು ಸ್ಲಂಗಳ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ.
ಇದು ಯಾವುದೋ ಅಲ್ಪಸಂಖ್ಯಾತ ಅಥವಾ ಯಾವುದೋ ಸಮುದಾಯದ ಪ್ರಶ್ನೆಯಲ್ಲ. ನಗರದ ಹೃದಯಭಾಗದಲ್ಲಿ ಯಾರೋ ಬಂದು ಆ ರೀತಿ ಒತ್ತುವರಿ ಮಾಡಿ ವಸತಿ ಪ್ರದೇಶಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಡಿಸಿಎಂ ಎಚ್ಚರಿಸಿದ್ದಾರೆ.
ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರೂ ಸಹ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಯಾರಾದರೂ ಸೂಕ್ತ ದಾಖಲೆಗಳನ್ನು ಹೊಂದಿದ್ದರೆ ಸರ್ಕಾರದಿಂದ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪಿಣರಾಯಿ ವಿಜಯನ್ ಅವರ ಹೇಳಿಕೆ ಬೆನ್ನಲ್ಲೇ ಕೆಲವರು ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅದೆಲ್ಲವೂ ಚುನಾವಣಾ ಸಂದರ್ಭದ ರಾಜಕೀಯ ಗಿಮಿಕ್ಸ್. ವಾಸ್ತವ ವಿಚಾರಗಳನ್ನು ತಿಳಿಯದೆ ಪಿಣರಾಯಿ ವಿಜಯನ್ ಅವರು ನಮ್ಮ ರಾಜ್ಯದ ಆಂತರಿಕ ವಿಚಾರದ ಕುರಿತು ಮಾತನಾಡಬಾರದು. ನಾನು ಅಧಿಕಾರಿಗಳಿಂದ ಈ ಕುರಿತು ವರದಿ ಕೇಳಿದ್ದೇನೆ. ವರದಿ ಪರಿಶೀಲಿಸಿ ಕೇರಳದ ನಾಯಕರು, ನಮ್ಮ ಪಕ್ಷದ ನಾಯಕರಿಗೂ ಸಹ ಪ್ರತಿಕ್ರಿಯೆ ನೀಡಲಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.

